ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು, ಮಳೆಗಾಲಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು : ಸ್ಪೀಕರ್ ಡಾ ಖಾದರ್ ಸೂಚನೆ - Karavali Times ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು, ಮಳೆಗಾಲಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು : ಸ್ಪೀಕರ್ ಡಾ ಖಾದರ್ ಸೂಚನೆ - Karavali Times

728x90

7 May 2026

ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು, ಮಳೆಗಾಲಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು : ಸ್ಪೀಕರ್ ಡಾ ಖಾದರ್ ಸೂಚನೆ

ಮಂಗಳೂರು, ಮೇ 07, 2026 (ಕರಾವಳಿ ಟೈಮ್ಸ್) : ಕುಡಿಯುವ ನೀರಿನ ಯೋಜನೆಗಳಿಗೆ ವಿಳಂಬವಿಲ್ಲದೇ ವಿದ್ಯುತ್ ಸಂಪರ್ಕ ನೀಡಲು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಸೂಚಿಸಿದ್ದಾರೆ.

ಪಡೀಲ್ ಪ್ರಜಾ ಸೌಧದಲ್ಲಿ ಉಳ್ಳಾಲ ತಾಲೂಕು ಬರ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇ 7 ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವೆಡೆ ಟ್ಯಾಂಕ್ ನಿರ್ಮಿಸಿ ಬೋರ್ ವೆಲ್ ಕೊರೆಯಲಾಗಿದ್ದರೂ ವಿದ್ಯುತ್ ಸಂಪರ್ಕ ವಿಳಂಬವಾಗಿ ನೀರು ಪೂರೈಕೆಗೆ ತೊಂದರೆಯಾಗುತ್ತಿವೆ. ಡೆಪಾಸಿಟ್ ಮೊತ್ತಕ್ಕೆ ಕಾಯದೆ, ವಿದ್ಯುತ್ ಸಂಪರ್ಕ ನೀಡಲು ಈಗಾಗಲೇ ಸರಕಾರ ಸೂಚಿಸಿದೆ. ಮುಂದೆ ಗ್ರಾಮ ಪಂಚಾಯತ್ ಗೆ ಅನುದಾನ ಬಂದಾಗ ಈ ಮೊತ್ತವನ್ನು ಹೊಂದಾಣಿಕೆ ಮಾಡುವಂತೆ ತಿಳಿಸಿದರು.

ಕುಡಿಯುವ ನೀರಿನ ಯೋಜನೆ ರೂಪಿಸುವಾಗ ಸ್ಥಳೀಯ ಸಮಸ್ಯೆಗಳನ್ನು ಅರಿತು ಅದಕ್ಕೆ ತಕ್ಕಂತೆ ಅನುಷ್ಠಾನಗೊಳಿಸಬೇಕು. ಮುಂದಿನ 30 ವರ್ಷದ ನೀರಿನ ಬೇಡಿಕೆ ಪೂರೈಸಲು ಯೋಜನೆ ಸಹಕಾರಿಯಾಗಬೇಕು. ಅಗತ್ಯ ಬಿದ್ದರೆ ವಿಶೇಷ ಅನುದಾನಕ್ಕೆ  ಪ್ರಯತ್ನಿಸಲಾಗುವುದು ಎಂದು ಸ್ಪೀಕರ್ ಡಾ ಖಾದರ್ ತಿಳಿಸಿದರು.

ಕುಡಿಯುವ ನೀರು ನಿರ್ವಹಣೆಗೆ ಅವಶ್ಯಕತೆಯಂತೆ ಅನುದಾನ ನೀಡಲಾಗುತ್ತಿದೆ. ಪೈಪ್ ಮೂಲಕ ನೀರು ಪೂರೈಕೆ ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಗ್ರಾಮ ಪಂಚಾಯತ್ ಅನುದಾನದೊಂದಿಗೆ ಟಾಸ್ಕ್ ಫೆÇೀರ್ಸ್ ನಿಂದಲೂ ಅನುದಾನ ನೀಡಲಾಗುವುದು ಎಂದವರು ತಿಳಿಸಿದರು. 

ಮುಂಬರುವ ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ತೊಂದರೆಯಾಗುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಎಲ್ಲಾ ಚರಂಡಿಗಳ ಹೂಳೆತ್ತಲು ಕ್ರಮ ವಹಿಸಬೇಕು. ಕಳೆದ ವರ್ಷ ಪ್ರಾಕೃತಿಕ ದುರಂತಗಳು ನಡೆದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ದುರಂತಗಳು ನಡೆದರೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಬೇಕು ಎಂದು ಸ್ಪೀಕರ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಿ ಇ ಒ ವಿನಾಯಕ್ ಕಾರ್ಭರಿ ಮಾತನಾಡಿ, ಜಿಲ್ಲೆಯಲ್ಲಿ  ಬರ ನಿರ್ವಹಣೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ಒಂದು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 12 ಲಕ್ಷ ಅನುದಾನ ಇದೆ ಎಂದರು. ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು, ಮಳೆಗಾಲಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು : ಸ್ಪೀಕರ್ ಡಾ ಖಾದರ್ ಸೂಚನೆ Rating: 5 Reviewed By: karavali Times
Scroll to Top