ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿ ಮೊಬೈಲ್ ಮೂಲಕ ಮಟ್ಕಾ ಜೂಜಾಟ ಆಡಿಸುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಕೇರಳ ಮೂಲದ ಆರೋಪಿಯನ್ನು ಬಂಧಿಸಿದ ಘಟನೆ ಜೂನ್ 28 ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು, ಮಂಜೇಶ್ವರ ನಿವಾಸಿ ರಂಜಿತ್ (35) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ಬಿ ಎಸ್ ನಾಯಕ್ ನೇತೃತ್ವದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಓಡಲು ಯತ್ನಿಸಿದ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಮಟ್ಕಾ ಜೂಜಾಟ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಹಾಗೂ ಆತನ ಬಳಿಯಿದ್ದ ಮೊಬೈಲ್ ಫೋಸ್ ಮತ್ತು ಕೃತ್ಯದಿಂದ ಸಂಗ್ರಹಿಸಿದ್ದ 750/- ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇಪು ನಿವಾಸಿ ಅಶೋಕ್ ಎಂಬಾತ ಆರೋಪಿಯ ಕೃತ್ಯಕ್ಕೆ ಸಹಕರಿಸಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment