ಪುತ್ತೂರು, ಜುಲೈ 10, 2026 (ಕರಾವಳಿ ಟೈಮ್ಸ್) : 2017ರ ಡಿಸೆಂಬರ್ 22 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮೂರು ಜನ ಅಪರಿಚಿತ ವ್ಯಕ್ತಿಗಳು ನುಗ್ಗಿ ಮನೆಯಲ್ಲಿದ್ದವರಿಗೆ ಪಿಸ್ತೂಲ್ ಮತ್ತು ಚೂರಿ ತೋರಿಸಿ ಸುಮಾರು 2.88 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 60 ಸಾವಿರ ರೂಪಾಯಿ ನಗದು ಹಣವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಕೇರಳ ತ್ರಿಶೂರ್ ನಿವಾಸಿ ನೆಲ್ಸನ್ ಸಿ.ವಿ (38) ಎಂಬಾತ 2021 ರ ಆಗಸ್ಟ್ 27 ರಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ಈವರೆಗೆ ಒಟ್ಟು 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿರುತ್ತದೆ. ಸದ್ರಿ ಆರೋಪಿಯನ್ನು ಜುಲೈ 8 ರಂದು ಪುತ್ತೂರು ನಗರ ಪೊಲೀಸ್ ಠಾಣಾ ಎಚ್.ಸಿ ಸಂತೋಷ್ ಎ, ಪಿಸಿಗಳಾದ ವಿನಾಯಕ ಹಾಗೂ ಶಿವರಾಜ್ ಅವರುಗಳು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಮಿಯೂರು ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸದ್ರಿ ಆರೋಪಿಯು ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು ಮುಚ್ಚಳಿಕೆಯನ್ನು ಪಡೆದುಕೊಂಡು ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ನ್ಯಾಯಾಲಯದ ಷರತ್ತಿನ ಆದೇಶವನ್ನು ಪದೇ ಪದೇ ಉಲ್ಲಂಘಿಸಿರುವುದರಿಂದ ಈತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment