ಬಂಟ್ವಾಳ, ಜುಲೈ 24, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮೊಡಂಕಾಪು ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಪೂಜಾ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಜುಲೈ 23 ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಂಚಿ ಗ್ರಾಮದ ಕೇಪಳ ಗುರಿ ನಿವಾಸಿ ಸುನಿಲ್ ಕುಮಾರ್ ಕೆ ಎನ್ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ಪ್ರಸ್ತುತ ಮಂಚಿ ಗ್ರಾಮದ ಕೇಪಳಗುರಿ ಎಂಬಲ್ಲಿ ವಾಸ್ತವ್ಯ ಹೊಂದಿದ್ದು, ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ವಾರ್ಡನ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಇವರ ತಂದೆಯ ಮೂಲ ಮನೆಯು ಮೊಡಂಕಾಪಿನಲ್ಲಿದ್ದು, ಅಲ್ಲಿ ಕೆಲವು ಪುರಾತನ ಕಾಲದ ದೇವರ ಪೂಜಾರ ಸಾಮಾಗ್ರಿಗಳಿವೆ. ಇವರು ತಿಂಗಳಿಗೊಮ್ಮೆ ಸಂಕ್ರಮಣ ದಿವಸ ಅಲ್ಲಿಗೆ ಹೋಗಿ ಬರುತ್ತಿರುವುದಾಗಿ. ಜುಲೈ 16 ರಂದು ಸಂಜೆ 6 ಗಂಟೆಗೆ ಸುನಿಲ್ ಅವರು ಮೊಡಂಕಾಪು ಮನೆಗೆ ಹೋಗಿ ಪೂಜೆ ಮುಗಿಸಿಕೊಂಡು ರಾತ್ರಿ 8 ಗಂಟೆ ವೇಳೆಗೆ ಮರಳಿ ಮಂಚಿ ಮನೆಗೆ ಬಂದಿದ್ದರು.
ಬಳಿಕ ಜುಲೈ 23 ರಂದು ಮಧ್ಯಾಹ್ನ 2.30 ಗಂಟೆಗೆ ಮೊಡಂಕಾಪು ಮನೆಗೆ ಹೋಗಿ ನೋಡಿದಾಗ ಮನೆಯ ಎದುರಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯೊಳಗಿದ್ದ ದೇವರ ಪೂಜೆಗೆ ಉಪಯೋಗಿಸುವ ಬೆಳ್ಳಿ ಸಾಮಾಗ್ರಿಗಳಾದ ಕೊಪ್ಪರಿಗೆ, 10 ದೀಪಗಳು, 10 ಹಿತ್ತಾಳೆ ಹಂಡೆ, 5 ಹಿತ್ತಾಳೆ ಹರಿವಾಣ, ತಾಮ್ರದ ಮಡಕೆ, 2 ತಾಮ್ರದ ಕೊಡಪಾನ, ತಾಮ್ರದ ಅಡ್ಯರ ಹಾಗೂ ಸ್ಟೀಲ್ ಸಾಮಾಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಳವಾಗಿರುವ ಸಾಮಾಗ್ರಿಗ್ರಳ ಒಟ್ಟು ಮೌಲ್ಯ 57 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುನಿಲ್ ಕುಮಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment