ಬಂಟ್ವಾಳ, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : ಶಿಥಿಲಾವಸ್ಥೆಗೆ ತಲುಪಿರುವ ಪಾಣೆಮಂಗಳೂರು ಬ್ರಿಟಿಷರ ಕಾಲದ ಹಳೆ ನೇತ್ರಾವತಿ ಸೇತುವೆಯ ಎರಡೂ ಬದಿಗಳಲ್ಲಿ ಘನ ವಾಹನ ಸಂಚಾರ ನಿಷೇಧಕ್ಕಾಗಿ ಅಳವಡಿಸಲಾಗಿರುವ ಕಬ್ಬಿಣದ ಕಮಾನು ಗೂಡಿನಬಳಿ ಭಾಗದಲ್ಲಿ ಮತ್ತೆ ಧರೆಗುರುಳಿದೆ. ಆದರೆ ಇದು ಯಾವ ಕಾರಣದಿಂದ ಉರುಳಿ ಬಿದ್ದಿದೆ. ವಾಹನ ಡಿಕ್ಕಿಯಾಗಿ ಮುರಿದು ಬಿದ್ದಿದೆಯೋ ಅಥವಾ ಕಿಡಿಗೇರಿ ಕೃತ್ಯವೋ ಎಂಬುದು ತಿಳಿದು ಬಂದಿಲ್ಲ.
ಇಲ್ಲಿನ ಹಳೆ ನೇತ್ರಾವತಿ ಸೇತುವೆ ಬಿರುಕು ಬಿಟ್ಟ ಬಳಿಕ ಸಾರ್ವಜನಿಕರ ಆತಂಕದ ಮೇರೆಗೆ ಸೇತುವೆಯ ಎರಡೂ ಬದಿಗಳಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಆರಂಭದಲ್ಲಿ ಅಳವಡಿಸಲಾಗಿದ್ದ ಕಮಾನು ತೀರಾ ದುರ್ಬಲವಾಗಿದ್ದು, ಪದೇ ಪದೇ ವಾಹನಗಳು ಡಿಕ್ಕಿ ಹೊಡೆದು ಕೆಳಕ್ಕುರುಳುತ್ತಿತ್ತು. ಬಳಿಕ ಈ ಬಗ್ಗೆ ಎಚ್ಚೆತ್ತ ಸ್ಥಳೀಯಾಡಳಿತ ಘನ ಕಬ್ಬಿಣದಿಂದ ಮಾಡಿದ ಕಮಾನು ಅಳವಡಿಸಿತ್ತು. ಕೆಲ ಸಮಯಗಳ ಕಾಲ ಇದು ಯಾವುದೇ ಚ್ಯುತಿ ಬಾರದೆ ಸದೃಢವಾಗಿ ನೆಲೆ ನಿಂತಿತ್ತು.
ಆದರೆ ಸೆ 3 ರಂದು ಬೆಳಿಗ್ಗೆ ಗೂಡಿನಬಳಿ ಬದಿಯ ಕಬ್ಬಿಣದ ಕಮಾನು ಹಠಾತ್ ಆಗಿ ನೆಲಕ್ಕುರುಳಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ಇದು ಯಾವ ರೀತಿ ಕೆಳಕ್ಕೆ ಬಿದ್ದಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ನೆಲಕ್ಕುರುಳಿದ ಕಮಾನನನ್ನು ಬದಿಗೆ ಸರಿಸಲಾಗಿ ಇಡಲಾಗಿದೆ. ಭಾರೀ ಗಾತ್ರದ ಈ ಕಮಾನನ್ನು ಬದಿಗೆ ಸರಿಸಲು ಸುಲಭದಲ್ಲಿ ಸಾಧ್ಯವಿಲ್ಲದಾಗಿದ್ದು, ಕ್ರೇನ್ ಬಳಸಿ ಇಡಲಾಗಿದಯೇ ಅಥವಾ ಯಾವ ರೀತಿ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.













0 comments:
Post a Comment