ಬಂಟ್ವಾಳ, ಸೆಪ್ಟೆಂಬರ್ 09, 2026 (ಕರಾವಳಿ ಟೈಮ್ಸ್) : ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆಟ್ಲಮುಡ್ನೂರು ಗ್ರಾಮ ಪಂಚಾಯಿತ್ ಮಟ್ಟದ ಸೌಂದರ್ಯ ಸಂಜೀವಿನಿ ಒಕ್ಕೂಟದ ಕಛೇರಿಯಲ್ಲಿ ಸೆ 9 ರಂದು ನಡೆಯಿತು.
ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯಿತ್ ಮಟ್ಟದ ಸೌಂದರ್ಯ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಅರುವತ್ತು ದಿನಗಳ ಕಾಲ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಒಕ್ಕೂಟದ ಅಧ್ಯಕ್ಷೆ ಅನಿತಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು ಭಾಗವಹಿಸಿದ್ದರು.
ತಾಲೂಕು ಕೃಷಿಯೇತರ ತರಬೇತಿ ವ್ಯವಸ್ಥಾಪಕ ಪ್ರದೀಪ್ ಕಾಮತ್ ಮಾತನಾಡಿ, ತರಬೇತಿಯ ನಂತರ ಬ್ಯಾಂಕ್ ಹಾಗೂ ಸಮುದಾಯ ಬಂಡವಾಳದಿಂದ ದೊರೆಯುವ ಸಾಲ ಸೌಲಭ್ಯವನ್ನು ಪಡೆದು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಿ ತಮ್ಮ ಸ್ವಾವಲಂಬಿ ಜೀವನ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ ಎಂದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯೆ ಶಕೀಲಾ ಕೆ ಪೂಜಾರಿ ಉಪಸ್ಥಿತರಿದ್ದರು.
ಇದೇ ವೇಳೆ ತರಬೇತು ನೀಡಿದ ಸುನೀತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ತರಬೇತಿಗಾಗಿ ಹೊಲಿಗೆ ಯಂತ್ರ ನೀಡಿ ಸಹಕರಿಸಿದ ಸಂಜೀವಿನಿ ಸದಸ್ಯರನ್ನು ಗೌರವಿಸಲಾಯಿತು. ಅರುವತ್ತು ದಿನಗಳ ಹೊಲಿಗೆ ಕೌಶಲ್ಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 23 ಮಂದಿ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸದಸ್ಯರು ಹೊಲಿಗೆ ಮಾಡಿದ ವಿವಿಧ ಮಾದರಿಯ ಬ್ಲೌಸ್, ಲಂಗ, ಫ್ರಾಕ್, ಸ್ಲಿಪ್, ನೈಟಿ ಹಾಗೂ ಮಕ್ಕಳ ವಿವಿಧ ರೀತಿಯ ಉಡುಪುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ತರಬೇತಿ ಪಡೆದ ಸದಸ್ಯರು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ಒಕ್ಕೂಟದ ಪ್ರೇಮಾ ಸ್ವಾಗತಿಸಿ, ಸ್ವಾತಿ ವಂದಿಸಿದರು. ಸುಧಾ ಕಾರ್ಯಕ್ರಮ ನಿರೂಪಿಸಿದರು.













0 comments:
Post a Comment