ಬಂಟ್ವಾಳ, ಜೂನ್ 07, 2025 (ಕರಾವಳಿ ಟೈಮ್ಸ್) : ರಸ್ತೆ ದಾಟುವಾಗ ಬಸ್ಸು ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಪುದು ಗ್ರಾಮದ ಫರಂಗಿಪೇಟೆ-ಮಾರಿಪಳ್ಳ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಯುವಕನನ್ನು ಮೂಲತಃ ಅಮ್ಮೆಮಾರ್ ನಿವಾಸಿ ಪ್ರಸ್ತುತ 10ನೇ ಮೈಲಿಕಲ್ಲಿನಲ್ಲಿ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಜಾಹಿದ್ ಎ ಯಾನೆ ಜಾಯಿ (27) ಎಂದು ಹೆಸರಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸುಮಾರು 9.15ರ ವೇಳೆಗೆ ಜಾಹೀದ್ ಅವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ರಸ್ತೆಯ ಎಡ ಬದಿಗೆ ಬರುವರೇ ರಸ್ತೆಯ ಮದ್ಯ ಭಾಗದಲ್ಲಿ ಡಿವೈಡರ್ ಕೆಳ ಭಾಗದಲ್ಲಿ ರಸ್ತೆಯಲ್ಲಿ, ರಸ್ತೆಯನ್ನು ದಾಟಲು ನಿಂತುಕೊಂಡಿದ್ದ ಸಂದರ್ಭ ಫರಂಗಿಪೇಟೆಯಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ಸಂತೋಷ್ ಪಿ ಎಂಬಾತ ಚಲಾಯಿಸುತ್ತಿದ್ದ ಕೆಎ19 ಎಫ್ 3317 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಜಾಹೀದ್ ಅವರು ರಸ್ತೆಗೆ ಬಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯರು ತಕ್ಷಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಜಾಹಿದ್ ಬೆಳಿಗ್ಗೆ ಸುಮಾರು 10.14ರ ವೇಳೆಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮೃತರ ಸಂಬಂಧಿ ಉಸ್ಮಾನ್ ಖಾದರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಾಯಿ, ಮೂವರು ಸಹೋದರರು, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment