ಬಂಟ್ವಾಳ, ಜೂನ್ 07, 2025 (ಕರಾವಳಿ ಟೈಮ್ಸ್) : ಕಾಲೇಜು ವಿದ್ಯಾರ್ಥಿಯೋರ್ವ ದೇವಾಲಯದ ಕೆಳಗೆ ಇರುವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವಗ್ಗ ಸಮೀಪದ ಕಾರಿಂಜದಲ್ಲಿ ಶನಿವಾರ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಇಲ್ಲಿನ ಕಾರಿಂಜ ಕ್ರಾಸ್ ನಿವಾಸಿ ಶ್ರೀಧರ್ ಮೂಲ್ಯ ಎಂಬವರ ಪುತ್ರ ಚೇತನ್ (19) ಎಂದು ಹೆಸರಿಸಲಾಗಿದೆ.
ಕಾರಿಂಜೇಶ್ವರ ದೇವಾಲಯದ ಕೆಳಗೆ ಇರುವ ಕೆರೆಯಲ್ಲಿ ಕಾಲು ತೊಳೆಯಲು ಇಳಿದ ವೇಳೆ ಆಯತಪ್ಪಿ ಕೆರೆಗೆ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚೇತನ್ ಪ್ರತಿ ವಾರವೂ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ಎಂದು ಹೇಳಲಾಗುತ್ತಿದ್ದು, ಶನಿವಾರ ಕೂಡಾ ಸ್ನೇಹಿತ ಪ್ರಶ್ವಿತ್ ಎಂಬಾತನ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಜೊತೆಯಲ್ಲಿ ಇದ್ದ ಪ್ರಶ್ವಿತ್ ಗೆ ಈಜು ತಿಳಿಯದ ಕಾರಣ ಆತ ಸ್ಥಳೀಯರಿಗೆ ಕರೆ ಮಾಡಿದ್ದಾನೆ. ತಕ್ಷಣ ಸ್ಥಳೀಯರು ಜಮಾಯಿಸಿ ಕಾರ್ಯಾಚರಣೆ ನಡೆಸಿ ಚೇತನ್ ನನ್ನು ಮೇಲಕ್ಕೆತ್ತಿದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment