ಭಾರೀ ಮಳೆಗೆ ಪಂಪ್ ವೆಲ್ ವೃತ್ತ ಬಳಿ, ಪಡೀಲ್ ಮೊದಲಾದೆಡೆ ಕೃತಕ ನೆರೆ : ವಾಹನ, ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಮಳೆಗಾಲಕ್ಕೆ ಪೂರ್ವ ಸಿದ್ದತೆ ನಡೆಸದ ಮನಪಾ ಆಡಳಿತಕ್ಕೆ ಜನರ ಹಿಡಿಶಾಪ - Karavali Times ಭಾರೀ ಮಳೆಗೆ ಪಂಪ್ ವೆಲ್ ವೃತ್ತ ಬಳಿ, ಪಡೀಲ್ ಮೊದಲಾದೆಡೆ ಕೃತಕ ನೆರೆ : ವಾಹನ, ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಮಳೆಗಾಲಕ್ಕೆ ಪೂರ್ವ ಸಿದ್ದತೆ ನಡೆಸದ ಮನಪಾ ಆಡಳಿತಕ್ಕೆ ಜನರ ಹಿಡಿಶಾಪ - Karavali Times

728x90

14 June 2025

ಭಾರೀ ಮಳೆಗೆ ಪಂಪ್ ವೆಲ್ ವೃತ್ತ ಬಳಿ, ಪಡೀಲ್ ಮೊದಲಾದೆಡೆ ಕೃತಕ ನೆರೆ : ವಾಹನ, ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಮಳೆಗಾಲಕ್ಕೆ ಪೂರ್ವ ಸಿದ್ದತೆ ನಡೆಸದ ಮನಪಾ ಆಡಳಿತಕ್ಕೆ ಜನರ ಹಿಡಿಶಾಪ

ಮಂಗಳೂರು , ಜೂನ್ 14, 2025 (ಕರಾವಳಿ ಟೈಮ್ಸ್) : ಶನಿವಾರ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ. ಮಂಗಳೂರು ಹೊರವಲಯದ ಪಂಪ್ ವೆಲ್ ವೃತ್ತದ ಬಳಿ ಇಡೀ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಹಾಗೂ ಜನ ಸಂಚಾರ ಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರಕ್ಕೆ ಹೋದ ಜನ ಮರಳಿ ಮನೆ ಸೇರಲು ಹಾಗೂ ವಿವಿಧ ಊರುಗಳಿಂದ ಮಂಗಳೂರು ನಗರದ ಕಡೆ ಹೊರಟಿದ್ದ ಜನ ಏನೂ ಮಾಡಲಾರದ ಪರಿಸ್ಥಿತಿ ತಲೆದೋರಿದ್ದು ಸಂಪೂರ್ಣ ಅತಂತ್ರರಾಗಿದ್ದಾರೆ. ರೋಗಿಗಳನ್ನು ಕರೆದೊಯ್ಯಿತ್ತಿದ್ದ ಅಂಬ್ಯುಲೆನ್ಸ್ ಸಹಿತ ತುರ್ತು ಸಂದರ್ಭಕ್ಕಾಗಿ ಸಂಚರಿಸುತ್ತಿದ್ದ ವಾಹನಗಳು ತೀವ್ರ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬಂತು. 

ರಸ್ತೆಯಲ್ಲಿ ನೆರೆಯಂತೆ ತುಂಬಿಕೊಂಡಿರುವ ಮಳೆ ನೀರಿನಿಂದಾಗಿ ವಾಹನಗಳು ಅರ್ಧ ಮುಳುಗಿದ ಸ್ಥಿತಿಯಲ್ಲೇ ಸಂಚಾರ ಮುಂದುವರಿಸಿದ ದೃಶ್ಯ ಕಂಡು ಬಂತು. ಪಂಪ್ ವೆಲ್ ಮಾತ್ರವಲ್ಲದೆ, ಪಡೀಲ್, ಕಣ್ಣೂರು ಜನಪ್ರಿಯ ಆಸ್ಪತ್ರೆಯ ಮುಂಭಾಗ ಸೇರಿದಂತೆ ಹಲವು ಕಡೆ ಅವಾಂತರ ಸೃಷ್ಟಿಯಾಗಿದೆ. ಸೇತುವೆಗಳು ನೀರಿನಿಂದ ಮುಳುಗಿದ್ದು ವಾಹನ, ಜನ ಸಂಚಾರ ಬಾಧಿತವಾಗಿದೆ. ಕಟ್ಟಡಗಳ ತಳ ಅಂತಸ್ತಿನ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದು ತೀವ್ರ ಸಮಸ್ಯೆ ಎದುರಾಗಿದೆ. 

ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವ್ಯಾಪ್ತಿ ಈ ಪರಿಸ್ಥಿತಿ ಅನುಭವಿಸುತ್ತಿದ್ದರೂ ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಬೇಕಾಬಿಟ್ಟಿ ಕಟ್ಟಡ ಕಟ್ಟಲು ಅನುಮತಿ ನೀಡುತ್ತಿರುವ ಮನಪಾ ಅಧಿಕಾರಿಗಳು ಮಳೆ ನೀರು ಹರಿದು ಹೋಗುವ ಯಾವ ವ್ಯವಸ್ಥೆಗಳನ್ನೂ ಮಾಡುತ್ತಿಲ್ಲ. ಅಲ್ಲದೆ ಮಳೆಗಾಲ ಪೂರ್ವದಲ್ಲಿ ಯಾವುದೇ ಪೂರ್ವ ಸಿದ್ದತೆಗಳನ್ನು ಸಕಾಲದಲ್ಲಿ ಮಾಡಿಕೊಳ್ಳದೆ ಸ್ವಯಂಕೃತಾಪರಾಧಕ್ಕೆ ಇದೀಗ ದೊಡ್ಡ ಮಟ್ಟದ ಬೆಲೆ ತೆರುವಂತಾಗಿದೆ. ಇರುವ ಚರಂಡಿಗಳನ್ನೂ ಹೂಳೆತ್ತುವ ಕಾಮಗಾರಿಯನ್ನೂ ನಡೆಸುತ್ತಿಲ್ಲ. ಚರಂಡಿ ಬಳಿ ಇರುವ ಅಂಗಡಿ-ಮುಂಗಟ್ಟುಗಳ ಮಾಲಕರು ಹಾಗೂ ಸಾರ್ವಜನಿಕರು ಕಸ-ಕಡ್ಡಿ, ತ್ಯಾಜ್ಯಗಳನ್ನು ಚರಂಡಿಗಳಿಗೇ ಎಸೆಯುತ್ತಿರುವುದರಿಂದ ಇರುವ ಎಲ್ಲ ಚರಂಡಿಗಳೂ ಬ್ಲಾಕ್ ಆಗಿ ಮಳೆ ನೀರು ಹರಿದು ಹೋಗದ ಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳ ಫಲವನ್ನು ಮಳೆಗಾಲದಲ್ಲಿ ಪ್ರತಿ ಬಾರಿಯೂ ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ನಗರ ಆಡಳಿತ ಹಾಗೂ ಜನಪ್ರತಿನಿಧಿಗಳ ಅಸಡ್ಡಗೆ ಜನ ಹಿಡಿಶಾಪ ಹಾಕುತ್ತಿರುವ ಸನ್ನಿವೇಶ ಪ್ರತಿಬಾರಿಯೂ ಕೇಳಿ ಬರುತ್ತಿದೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆಗೆ ಪಂಪ್ ವೆಲ್ ವೃತ್ತ ಬಳಿ, ಪಡೀಲ್ ಮೊದಲಾದೆಡೆ ಕೃತಕ ನೆರೆ : ವಾಹನ, ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಮಳೆಗಾಲಕ್ಕೆ ಪೂರ್ವ ಸಿದ್ದತೆ ನಡೆಸದ ಮನಪಾ ಆಡಳಿತಕ್ಕೆ ಜನರ ಹಿಡಿಶಾಪ Rating: 5 Reviewed By: karavali Times
Scroll to Top