ಬೆಳ್ತಂಗಡಿ, ಜೂನ್ 09, 2025 (ಕರಾವಳಿ ಟೈಮ್ಸ್) : ತಾಲೂಕಿನ ಉಜಿರೆಯಲ್ಲಿ ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿ ಕಳ್ಳರು ಕೈ ಚಳಕ ತೋರಿಸಿದ ಘಟನೆ ಜೂನ್ 8 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಉಜಿರೆ ಗ್ರಾಮದ ಕರಕಡ ನಿವಾಸಿ ಹರೀಶ್ ಎಂ ಅವರಿಗೆ ಸೇರಿದ ಉಜಿರೆಯಲ್ಲಿರುವ ಬಾಲಾಜಿ ಎಂಟರ್ ಪ್ರೈಸಸ್ ಎಂಬ ದಸ್ತಾವೇಜು ಹಾಗೂ ವಾಹನಗಳ ಶೀಟ್ ಕವರ್ ಅಂಗಡಿಗೆ ನುಗ್ಗಿ 32 ಸಾವಿರ ರೂಪಾಯಿ ನಗದು ಕಳವುಗೈಯಲಾಗಿದೆ. ಇದರಲ್ಲಿ ಹರೀಶ್ ಅವರ ಸಂಬಂಧಿ ಮಧುಕರ ಅವರು ಪಿಗ್ನಿ ಕಲೆಕ್ಷನ್ ಮಾಡಿ ತಂದು ನಾಳೆ ತೆಗೆದುಕೊಳ್ಳುತ್ತೇನೆ ಎಂದು ಇಟ್ಟಿದ್ದ 30 ಸಾವಿರ ರೂಪಾಯಿ ಹಾಗೂ ಅಂಗಡಿಯ ವ್ಯಾಪಾರದ ಬಾಬ್ತು ಇಟ್ಟಿದ್ದ 2 ಸಾವಿರ ರೂಪಾಯಿ ನಗದು ಹಣ ಒಳಗೊಂಡಿತ್ತು.
ಸಮೀಪದ ಪ್ರಸಾದ್ ಎಂಬವರ ಮಾಲಕತ್ವ ಮಧುರ ಎಂಟರ್ ಪ್ರೈಸಸ್ ಅಂಗಡಿಯ ಬೀಗ ಒಡೆದು ಅಲ್ಲಿದ್ದ 6 ಸಾವಿರ ರೂಪಾಯಿ ನಗದು ಹಣವನ್ನು ದೋಚಲಾಗಿದೆ. ಅಲ್ಲದೆ ಶ್ರೀ ಗಣೇಶ್ ಎಲೆಕ್ಟ್ರಿಕಲ್ ಅಂಗಡಿಯ ಬಾಗಿಲನ್ನು ಒಡೆದಿರುತ್ತಾರೆ. ಒಟ್ಟು 38 ಸಾವಿರ ರೂಪಾಯಿ ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಅಂಗಡಿ ಮಾಲಕರು ಜೂನ್ 7 ರಂದು ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ಹೋದ ಬಳಿಕ ಮರುದಿನ ಅಂದರೆ ಜೂನ್ 8 ರ ಬೆಳಿಗ್ಗಿನ ಮಧ್ಯದ ಅವಧಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ.
0 comments:
Post a Comment