ಮಂಗಳೂರು, ಜುಲೈ 15, 2025 (ಕರಾವಳಿ ಟೈಮ್ಸ್) : ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿಯನ್ನು ಸುರತ್ಕಲ್ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಉಡುಪಿ ಜಿಲ್ಲೆ ಮಂಚಿ ಅಂಚೆ ವ್ಯಾಪ್ತಿಯ, ಇಂದ್ರಾಳಿ ದುರ್ಗಾನಗರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಬಳಿ ನಿವಾಸಿ, ಪ್ರಸ್ತುತ ಧಾರವಾಢ ಜಿಲ್ಲೆಯ ಟೋಲ್ ನಾಕ, ಜನತ್ ನಗರ 2ನೇ ಕ್ರಾಸ್ ರಸ್ತೆ ಬಳಿ ವಾಸವಾಗಿರುವ ದಿವಂಗತ ವಿಠಲ ನಾಯ್ಕ್ ಅವರ ಪುತ್ರ ರಾಜೇಶ್ ನಾಯ್ಕ್ ಅಲಿಯಾಸ್ ರಾಜ್ ಅಲಿಯಾಸ್ ರಾಜು ಪಮಾಡಿ (48) ಎಂದು ಗುರುತಿಸಲಾಗಿದೆ.
ಆರೋಪಿಯು ಮಂಗಳೂರು ನಗರ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಧಾರವಾಡ ಹಾಗೂ ವಿವಿಧ ಕಡೆಗಳಲ್ಲಿ ಕೊಲೆ ಯತ್ನ, ಕಳವು, ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ಜುಲೈ 14 ರಂದು ಧಾರವಾಡ ಜಿಲ್ಲೆಯ ವಿದ್ಯಾಗಿರಿ ಎಂಬಲ್ಲಿಂದ ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈತನ ವಿರುದ್ದ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 4 ಕಳವು ಪ್ರಕರಣ, ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಕಳವು ಪ್ರಕರಣ, ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ ಸಹ ಖೈದಿಗಳಿಗೆ ಹಾಗೂ ಜೈಲ್ ಸಿಬ್ಬಂದಿಯವರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ 2 ಪ್ರಕರಣವು ಬರ್ಕೆ ಠಾಣೆಯಲ್ಲಿ ದಾಖಲಾಗಿರುತ್ತದೆ. ಅಲ್ಲದೇ ಉಡುಪಿ ಜಿಲ್ಲೆಯ ಮಣಿಪಾಲ, ಹಿರಿಯಡ್ಕ, ಬೈಂದೂರು, ಉಡುಪಿ ನಗರ, ಕುಂದಾಪುರ, ಗಂಗೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹೊನ್ನಾವರ, ಧಾರವಾಡ ಜಿಲ್ಲೆಯ ಉಪನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 21 ಪ್ರಕರಣಗಳು ದಾಖಲಾಗಿದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 10 ವಾರಂಟ್ ಜಾರಿಯಾಗಿದೆ. ಆರೋಪಿಯನ್ನು ಸುರತ್ಕಲ್ ಠಾಣಾ ಸಿಬ್ಬಂದಿಗಳಾದ ಅಜಿತ್ ಮ್ಯಾಥ್ಯೂ, ಸುನಿಲ್ ಅವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment