ಬೆಂಗಳೂರು, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ನಾವು ಅಸ್ತ್ರಗಳಿಂದ, ಹಗೆಗಳಿಂದ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ. ಅಕ್ಷರಗಳಿಂದ, ಪ್ರೀತಿಯಿಂದ ಬದುಕನ್ನು ಗೆಲ್ಲಬಹುದು ಎಂದು ಸಾಹಿತಿ, ಬರಹಗಾರ್ತಿ ಬಾನು ಮುಶ್ತಾಕ್ ಹೇಳಿದರು.
ನಾಡಹಬ್ಬ ದಸರಾ ಮಹೋತ್ಸವವನ್ನು ಮೈಸೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು, ಆಕಾಶ ತನ್ನ ನೆರಳಿನಿಂದ ಯಾರನ್ನೂ ಹೊರತಳ್ಳುವುದಿಲ್ಲ, ಭೂಮಿ ಯಾರನ್ನೂ ಬೇರ್ಪಡಿಸುವುದಿಲ್ಲ. ನಮ್ಮನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲ ಹೂವುಗಳು ಅದರದ್ದೇ ಆದ ಬಣ್ಣದಲ್ಲಿ ಅರಳಲಿ, ಅದರದ್ದೇ ಸುವಾಸನೆ ಬೀರಲಿ. ಪ್ರತಿಯೊಂದು ಹಕ್ಕಿಗಳು ಕೂಡಾ ತನ್ನದೇ ರಾಗದಲ್ಲಿ ಹಾಡಲಿ. ಇಲ್ಲಿ ಹಾಕಿರುವ ಗಡಿಗಳನ್ನು ನಾವೇ ಅಳಿಸಿ ಹಾಕಬೇಕು. ನಮ್ಮೊಳಗಿರುವ ದ್ವೇಷ, ಅಸಹಿಷ್ಣುತೆ ನಾಶವಾಗಲಿ ಎಂದರು.
ಎಲ್ಲರನ್ನೂ ಒಳಗೊಳ್ಳುವ ಮನಸ್ಸು ನನ್ನದು. ಈ ನೆಲದಲ್ಲಿ ಮಾನವೀಯ ತುಡಿತ ಇದೆ. ತಾಯಿ ಚಾಮುಂಡಿ ನಮ್ಮಲ್ಲಿನ ದ್ವೇಷ, ಅಸಹಿಷ್ಣುತೆ ನಿವಾರಣೆ ಮಾಡಲಿ. ನನ್ನ ಧಾರ್ಮಿಕ ನಂಬಿಕೆಗಳ ಜೀವಪರವಾಗಿವೆ. ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ನಡೆದುಕೊಳ್ಳೋಣ ಎಂದರು.
ಸಂಸ್ಕೃತಿಯು ಹೃದಯಗಳಿಗೆ ಸೇತುವೆಯಾಗಿದೆ, ಅದು ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತದೆ, ದ್ವೇಷವನ್ನಲ್ಲ. ಎಲ್ಲಾ ಜೀವಗಳನ್ನು ಗೌರವಿಸಬೇಕು ಎಂದು ಈ ಭೂಮಿ ನನಗೆ ಕಲಿಸಿದೆ. ಜಗತ್ತು ಯುದ್ಧದ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ ಮತ್ತು ಮಾನವೀಯತೆಯು ದ್ವೇಷ ಮತ್ತು ರಕ್ತಪಿಪಾಸೆಯಿಂದ ಉತ್ತೇಜಿಸಲ್ಪಟ್ಟಾಗ, ಮೈಸೂರು ದಸರಾ ಶಾಂತಿ ಮತ್ತು ಸೌಹಾರ್ದತೆಗೆ ಒಂದು ಸ್ಪಷ್ಟ ಕರೆಯಾಗಿದೆ ಎಂದರು.
ನಾವು ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ಪರಸ್ಪರರ ನಂಬಿಕೆ ವ್ಯವಸ್ಥೆಗಳು ಮತ್ತು ಮೌಲ್ಯಗಳನ್ನು ಗೌರವಿಸೋಣ. ಏಕತೆ ಮತ್ತು ಸಮಗ್ರತೆ ಈ ಭೂಮಿಯ ಸುಗಂಧವಾಗಲಿ. ಚಾಮುಂಡೇಶ್ವರಿ ದೇವಿಯ ಆಶೀರ್ವಾದಗಳು ನಮಗೆ ಮಾರ್ಗದರ್ಶನ ನೀಡಲಿ. ಅವರ ಶಕ್ತಿ, ಪ್ರೀತಿ ಮತ್ತು ಧೈರ್ಯವು ನಮ್ಮೊಳಗಿನ ದ್ವೇಷ ಮತ್ತು ಅಸಹಿಷ್ಣುತೆಯನ್ನು ಜಯಿಸಲು ನಮಗೆ ಸಹಾಯ ಮಾಡಲಿ ಎಂದ ಬಾನು, ಈ ದಸರಾ ಹಬ್ಬವು ಈ ರಾಜ್ಯ ಮತ್ತು ರಾಷ್ಟ್ರದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಶಾಂತಿ, ಸಾಮರಸ್ಯ ಮತ್ತು ನ್ಯಾಯದ ಬೆಂಕಿಯನ್ನು ಹೊತ್ತಿಸಲಿ. ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾದರ್À ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ, ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಎಂದು ಆಶಿಸಿದರು.
ನಾನು ಇದುವರೆಗೂ ಸುಮಾರು ಕಾರ್ಯಕ್ರಮ ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ. ನೂರಾರು ಬಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ, ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು.
ಎಷ್ಟೇ ಸವಾಲುಗಳು ಬಂದರೂ ಕೂಡ ಧೃತಿಗೆಡದೆ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ, ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನವನ್ನು ನೀಡಿ, ನೈತಿಕ ಬೆಂಬಲವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿ ಬಾನು ಮುಶ್ತಾಕ್ ಭಾಷಣಕ್ಕೆ ತೆರೆ ಎಳೆದರು.
0 comments:
Post a Comment