ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರದಲ್ಲಿ ಪರವಾನಿಗೆ ಪಡೆಯದೆ ಧ್ವನಿವರ್ಧಕ ಅಳವಡಿಸಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ಆಝಾನ್ ಕರೆದ ಆರೋಪದಲ್ಲಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿಂದ ವರದಿಯಾಗಿದೆ.
ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಇಸಾಕ್ ಎಂಬವರ ಅಧ್ಯಕ್ಷತೆಯಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಶಿಕ್ಷಣದ ಕಟ್ಟಡದಲ್ಲಿ ಇತ್ತೀಚೆಗೆ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಧ್ವನಿವರ್ಧಕ ಅಳವಡಿಸಿಕೊಂಡು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ದಿನಕ್ಕೆ 5 ಬಾರಿ ಆಝಾನ್ ಕರೆಯುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಜನರಿಗೆ ತೊಂದರೆಯಾಗುತ್ತಿದ್ದು, ಈ ಮೂಲಕ ಧ್ವನಿವರ್ಧಕಗಳ ಬಳಕೆಯ ಬಗೆಗಿನ ಕಾನೂನನ್ನು ಉಲ್ಲಂಘಿಸಿರುತ್ತಾರೆ ಎಂದು ಠಾಣೆಗೆ ಬಂದ ದೂರನ್ನು ಸ್ವೀಕರಿಸಿದ ಪೊಲೀಸರು ನ್ಯಾಯಾಲಯದಲ್ಲಿ ಅನುಮತಿ ಪಡೆದು ಸೆ 6 ರಂದು ಠಾಣೆಯಲ್ಲಿ ಅಪರಾಧ ಕ್ರಮಾಂಕ 133/2025 ಕಲಂ 37,92(ಐ), 109 ಕೆಪಿ ಆಕ್ಟ್ ಹಾಗೂ 292 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜುಲೈ 31 ರಂದು ಸದ್ರಿ ಕಟ್ಟಡವು ಅಕ್ರಮವಾಗಿ ನಿರ್ಮಿಸಿರುವುದಕ್ಕೆ ಮತ್ತು ಧ್ವನಿವರ್ಧಕದ ದುರುಪಯೋಗಕ್ಕಾಗಿ ಗ್ರಾಮ ಪಂಚಾಯತಿನಿಂದ ನೋಟಿಸ್ ನೀಡಲಾಗಿರುತ್ತದೆ. ಜುಲೈ 31 ರಂದು ಅಕ್ರಮ ಕಟ್ಟಡದಲ್ಲಿ ಧ್ವನಿವರ್ಧಕ ಪರವಾನಗಿ ರದ್ದುಗೊಳಿಸುವಂತೆ ಗ್ರಾಮ ಪಂಚಾಯತಿನಿಂದ ಪೆÇಲೀಸರಿಗೆ ಪತ್ರ ನೀಡಲಾಗಿದೆ. ಆಗಸ್ಟ್ 13 ರಂದು ಪೆÇಲೀಸರಿಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮತ್ತು ಪರವಾನಗಿ ನೀಡಲಾದ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗಾಗಿ ಧ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಡಿವೈಎಸ್ಪಿ ಅವರು ಧ್ವನಿವರ್ಧಕ ಬಳಕೆಯ ಪರವಾನಗಿ ರದ್ದುಗೊಳಿಸಿರುತ್ತಾರೆ.
ಸೆ 6ರಂದು ಧ್ವನಿವರ್ಧಕದ ಅಕ್ರಮ ಬಳಕೆಗೆ ಸಂಬಂಧಪಟ್ಟಂತೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ 7 ರಂದು ಸದ್ರಿ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು, ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ಇಂತಹ ಯಾವುದೇ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡದಂತೆ ಹಾಗೂ ಅಂತಹ ಸುದ್ದಿಗಳಿಗೆ ಮಾನ್ಯತೆ ಕೊಡದಂತೆ ಮನವಿ ಮಾಡಿಕೊಂಡಿದ್ದಾರೆ.

















0 comments:
Post a Comment