ಬಂಟ್ವಾಳ, ಅಕ್ಟೋಬರ್ 17, 2025 (ಕರಾವಳಿ ಟೈಮ್ಸ್) : ಅತ್ಯಂತ ಸರಳ ಹಾಗೂ ವಿದ್ಯಾರ್ಥಿ ಪ್ರೇಮಿಯಾಗಿದ್ದ ಡಾ ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವನವೇ ಸಂದೇಶವೆಂದು ಸಾರಿದವರು. ರಾಷ್ಟ್ರಪತಿಯಾಗಿದ್ದಾಗ ಮಾಡಿದಂತಹ ಕಾರ್ಯಗಳು ಚಿರಸ್ಮರಣೀಯವಾದುದು ಎಂದು ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಹೇಳಿದರು.
ಕಾಲೇಜಿನ ವಿಜ್ಞಾನ ಸಂಘ ಹಾಗೂ ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಡಾ ಎಪಿಜೆ ಅಬ್ದುಲ್ ಕಲಾಂ ಜನ್ಮದಿನಾಚರಣೆ ಪ್ರಯುಕ್ತ ನಡೆದ ವಿಶ್ವ ವಿದ್ಯಾರ್ಥಿಗಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ಸುಯೋಗ ವರ್ಧನ್ ಡಿ ಎಂ ಅವರು ಡಾ ಕಲಾಂ ಅವರ ಸಾಧನೆಗಳು, ವೈಜ್ಞಾನಿಕ ಕೊಡುಗೆಗಳು ಮತ್ತು ಜೀವನ ಶೈಲಿಯ ಕುರಿತು ವಿವರಿಸಿದರು.
ಈ ಸಂದರ್ಭ ರಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಝೀನಾ ಕೊಹಿಲೊ ಹಾಗೂ ಐ ಕ್ಯು ಎ ಸಿ ಸಂಯೋಜಕ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಭಾಗವಹಿಸಿದ್ದರು. ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ ವಿನಾಯಕ ಕೆ ಎಸ್ ಸ್ವಾಗತಿಸಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಸುಪ್ರೀತ್ ಕಡಕೋಳ್ ವಂದಿಸಿದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment