ಬೆಳಗಾವಿ : ಶರಣ, ಸಂತ, ತತ್ವಪದಕಾರ ಮತ್ತು ಸಾಹಿತಿ ಮಡಿವಾಳಪ್ಪ ಅವರ ಕುರಿತು ಚಿಂತನಾ ಕಾರ್ಯಕ್ರಮ - Karavali Times ಬೆಳಗಾವಿ : ಶರಣ, ಸಂತ, ತತ್ವಪದಕಾರ ಮತ್ತು ಸಾಹಿತಿ ಮಡಿವಾಳಪ್ಪ ಅವರ ಕುರಿತು ಚಿಂತನಾ ಕಾರ್ಯಕ್ರಮ - Karavali Times

728x90

24 November 2025

ಬೆಳಗಾವಿ : ಶರಣ, ಸಂತ, ತತ್ವಪದಕಾರ ಮತ್ತು ಸಾಹಿತಿ ಮಡಿವಾಳಪ್ಪ ಅವರ ಕುರಿತು ಚಿಂತನಾ ಕಾರ್ಯಕ್ರಮ

ಬೆಳಗಾವಿ, ನವೆಂಬರ್ 24, 2025 (ಕರಾವಳಿ ಟೈಮ್ಸ್) : ಲಿಂಗಾಯತ ಸಂಘಟನೆ ಬೆಳಗಾವಿಯಿಂದ ಮಹಾಂತೇಶ ನಗರದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ವಚನಶ ವಿಶ್ಲೇಷಣೆ ಚಿಂತನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

ಈರಣ್ಣಾ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಸುನೀಲ ಸಾಣಿಕೊಪ್ಪ ಅವರು 12ನೇ ಶತಮಾನದ ಶರಣ ಕಡಕೋಳ ಮಡಿವಾಳಪ್ಪ, 18ನೇ ಶತಮಾನದ ಶರಣ ಗರಗದ ಮಡಿವಾಳಪ್ಪ, 18ನೇ ಶತಮಾನದ ತತ್ವಪದಕಾರ ಕಡಕೋಳ ಮಡಿವಾಳಪ್ಪ ಹಾಗೂ 19ನೇ ಶತಮಾನದ ಸಾಹಿತಿಯಾದ ಗಂಗಾಧರ ಮಡಿವಾಳಪ್ಪ ತುರಮರಿ ಇವರ ಕುರಿತು ಮಾತನಾಡಿದರು. 

12ನೇ ಶತಮಾನದ ಶರಣ ಕಡಕೋಳ ಮಡಿವಾಳಪ್ಪ ಅವರು 78 ವಚನಗಳನ್ನು ರಚಿಸಿದ್ದಾರೆ. ಇವರು ಅಂಕಿತ ನಾಮ ನಿರೂಪಮ ನಿರಾಳ ಮಹತ್ಪ್ರಭು ಮಹಾಂತ ಯೋಗಿ. ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ ಷಡ್ರಸವನೊಂದು ಮಾಡಿಕೊಂಡು ಸವಿದುಂಡು ಚಿಂತೆಗೆಟ್ಟು ಸಂತೋಷವು ಅಳವಟ್ಟು ನಗಿಗೆ ಹಗೆಗೆ ಒಂದಾಗಿ, ಝಗಝಗನೆ ಹೊಳೆದು ವೈರಾಗ್ಯವೇ ಆರೋಗ್ಯವಾಗಿ ಭವರೋಗಬ್ಯಾ£ಗೆ ನೆಲಿಯಾಗಿ ಬಾಳಬೇಕು ಎಂದು ಸಾರಿದರು.

18ನೇ ಶತಮಾನದ ಶರಣ ಗರಗದ ಮಡಿವಾಳಪ್ಪ ಮಲ್ಲಸರ್ಜ್ ದೇಸಾಯಿ, ಚೆನ್ನಮ್ಮ, ರುದ್ರಮ್ಮ ಅವರ ಕೃಪಾಕಟಾಕ್ಷದಲ್ಲಿ ಬೆಳೆದದ್ದು, ಶಿವಲಿಂಗಸರ್ಜನ ಸಹಪಾಠಿಯಾಗಿದ್ದರು. ಅವರು ಯಾವುದೇ ಸಾಹಿತ್ಯ ರಚನೆ ಮಾಡಿಲ್ಲವಾದರೂ, ತಮ್ಮ ಸಮಕಾಲೀನರಾದ ಸಿದ್ದಾರೂಢರು, ನಾಗಲಿಂಗ ಸ್ವಾಮಿಗಳು, ಹಾಲಕೆರೆ ಸ್ವಾಮಿಗಳು, ಶಿಶುನಾಳ ಶರೀಫರ ಜೊತೆಗೆ ಆಧ್ಯಾತ್ಮದ ಬಗೆಗೆ ಚಿಂತನ-ಮಂಥನ ಮಾಡುತ್ತಿದ್ದರು. ಯಾವಾಗಲೂ ಅರಿವಿನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಕಟ್ಟಿಕೊಂಡಿದ್ದರು ಮತ್ತು ಮೂಢ ನಂಬಿಕೆಯನ್ನು ವಿರೋಧಿಸುತ್ತಿದ್ದರು. ಮೂರ್ತಿ ಪೂಜೆಗೆ ಆಸ್ಪದ ಕೊಡುತ್ತಿರಲಿಲ್ಲ. ನೇಪಾಳ, ಮೆಕ್ಕಾ-ಮದಿನಾ ಆದಿಯಾಗಿ ಇಡೀ ಜಗತ್ತು  ಸಂಚರಿಸಿದರು. ಕಟ್ಟಕಡೆಗೆ ಅವರು ಬಂದು ನೆಲೆಸಿದ್ದು ಗದಗದಲ್ಲಿ.

18ನೇ ಶತಮಾನದ ತತ್ವಪದಕಾರ ಕಡಕೋಳ ಮಡಿವಾಳಪ್ಪ ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನ ಮೊದಲೇ ಬದುಕಿದವರು. ಕಲಬುರಗಿ ಜಿಲ್ಲೆಯ ಬಿದನೂರು, ಮಡಿವಾಳಪ್ಪನ ಹುಟ್ಟೂರು. ಕಲಬುರಗಿ ಜಿಲ್ಲೆಯ ಇಂದಿನ ಯಡ್ರಾಮಿ ತಾಲ್ಲೂಕಿನ ಕಡಕೋಳ ಮಡಿವಾಳಪ್ಪನ ಕಾಯಕ ಭೂಮಿ. ಅನುಭಾವ ಪರಂಪರೆಗೆ ಸೇರಿದ ಮಡಿವಾಳಪ್ಪನನ್ನು ತತ್ವಪದಗಳ ಅಲ್ಲಮನೆಂದೇ ಭಾವಿಸಲಾಗುತ್ತದೆ.

ಇಲ್ಲ್ಯಾದೊ ಮುಕುತಿ, ಅಲ್ಯಾಕೊ ಹುಡುಕುತಿ | ಕೇಳಿ ಜಾತಿ ಶಿವ ಧ್ಯಾನ ಮಾಡಣ್ಣ ಎಂಬ ಹಲವಾರು ಸುಪ್ರಸಿದ್ಧ ತತ್ವ ಪದಗಳನ್ನು ರಚಿಸಿದ್ದಾರೆ.

ಗಂಗಾಧರ ಮಡಿವಾಳೇಶ್ವರ ತುರಮರಿಯವರು 1827ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಕನ್ನಡ ಭಾಷೆಯ ಪ್ರಚಾರವನ್ನೆ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ತುರಮರಿಯವರು, ಬೈಲಹೊಂಗಲದಲ್ಲಿ ‘ಗಾವಠೀ’ ಶಾಲೆಯನ್ನು ತೆರೆದರು. ಪುರಾಣ ಪ್ರವಚನಗಳನ್ನು, ಹಳಗನ್ನಡ ಕಾವ್ಯ ವಾಚನಗಳನ್ನು ಮಾಡುತ್ತಿದ್ದರು. ಡೆಪ್ಯೂಟಿ ಚೆನ್ನಬಸಪ್ಪನವರು ತುರಮರಿಯವರ ಬೋಧನಾ ಕ್ರಮ ಹಾಗೂ ಕನ್ನಡ ಪಾಂಡಿತ್ಯಗಳಿಂದ ಪ್ರಭಾವಿತರಾಗಿ ಅವರನ್ನು ಬೆಳಗಾವಿಯಲ್ಲಿರುವ ನಾರ್ಮಲ್ ಸ್ಕೂಲಿಗೆ ಸಹಾಯಕ ಅಧ್ಯಾಪಕರನ್ನಾಗಿ ನಿಯಮಿಸಿದರು. ತುರಮರಿ ಅವರು ಅನೇಕ ಭಾಷಾಂತರ ಕಾರ್ಯಗಳನ್ನು ಕೈಗೊಂಡರು. ಇದಲ್ಲದೆ, ಅವರು ಪಠ್ಯ ಹಾಗೂ ಪಠ್ಯೇತರ ಪುಸ್ತಕಗಳ ರಚನೆ ಮಾಡಿದರು. ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಗೆ, ಷಡಕ್ಷರ ದೇವನ ರಾಜಶೇಖರ ವಿಲಾಸಕ್ಕೆ ಹಾಗೂ ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ತುರಮರಿಯವರು ವ್ಯಾಖ್ಯಾನ ಬರೆದಿದ್ದಾರೆ. ಈ ರೀತಿಯಾಗಿ ಕನ್ನಡ ಶಿಕ್ಷಣಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸುನೀಲ ಸಾಣಿಕೊಪ್ಪ ವಿವರಿಸಿದರು.

ಸುರೇಶ ನರಗುಂದ ಅವರು ವಚನ ಪ್ರಾರ್ಥನೆ ನಡೆಸಿದರು. ಬಸವರಾಜ ಬಿಜ್ಜರಗಿ, ವಿ.ಕೆ. ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಶಿವಲೀಲಾ ಗೌಡರ, ಶ್ರೀದೇವಿ ನರಗುಂದ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಗುರಸಿದ್ದಪ್ಪ ರೇವಣ್ಣವರ, ಶಂಕ್ರಪ್ಪ ಮೆಣಸಗಿ, ಲಕ್ಸ್ಮಿ ಜೇವಣಿ, ಸುದೀಪ ಪಾಟೀಲ,  ಲಕ್ಸ್ಮಿಕಾಂತ ಗುರವ ಹಾಗೂ ಇನ್ನುಳಿದ ಶರಣ ಶರಣೆಯರು ಭಾಗವಹಿಸಿದ್ದರು. ನಂದಾ ಬಗಲಿ ದಾಸೋಹ ಸೇವೆಗೈದರು. ಸುರೇಶ ನರಗುಂದ ವಂದಿಸಿದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬೆಳಗಾವಿ : ಶರಣ, ಸಂತ, ತತ್ವಪದಕಾರ ಮತ್ತು ಸಾಹಿತಿ ಮಡಿವಾಳಪ್ಪ ಅವರ ಕುರಿತು ಚಿಂತನಾ ಕಾರ್ಯಕ್ರಮ Rating: 5 Reviewed By: karavali Times
Scroll to Top