ಬೆಂಗಳೂರಿನಲ್ಲಿ ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪಾರ್ಟಿಸಿಪೆನ್ಸರ್ ಸಮ್ಮೇಳನ : ನೂತನ ಅಧ್ಯಕ್ಷರಾಗಿ ಎಸ್. ವೆಂಕಟರಮಣಿ ಅಧಿಕಾರ ಸ್ವೀಕಾರ
ಬೆಂಗಳೂರು, ಡಿಸೆಂಬರ್ 15, 2025 (ಕರಾವಳಿ ಟೈಮ್ಸ್) : ಹೊಸ ತೆರಿಗೆ ಕಾಯ್ದೆ ಜಾರಿಗೆ ತರುತ್ತಿದ್ದು, ಇದರಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಗಾಗಿ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಪರಿಚಯಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಉಜ್ವಲ್ ಭೂಯಾನ್ ಹೇಳಿದರು.
ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪಾರ್ಟಿಸಿಪೆನ್ಸರ್, ಕರ್ನಾಟಕ ಸ್ಟೇಟ್ ಚಾರ್ಟೆಡ್ ಅಕೌಂಟ್ಸ್ ಅಸೋಸಿಯೇಷನ್ ಬೆಂಗಳೂರು, ಬ್ರಾಂಚ್ ಆಫ್ ಎಸ್ ಐ ಆರ್ ಸಿ ಆಫ್ ಐಸಿಎಐ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 28ನೇ ರಾಷ್ಟೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಕಾಯ್ದೆ-1961ನ್ನು ಆರು ದಶಕಗಳ ನಂತರ ರದ್ದುಪಡಿಸಲಾಗಿದ್ದು, ಅದರ ಬದಲಿಗೆ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆ ಬರುತ್ತದೆ. ಇದು ಮುಂದಿನ ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ. ಅನುಸರಣೆ ಸರಳೀಕರಣ, ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮಾನವಪರವಾದ ಪಕ್ಷಪಾತವನ್ನು ಕಡಿಮೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಗಾಗಿ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಪರಿಚಯಿಸಲಾಗಿದೆ ಎಂದರು.
ವರ್ಚುವಲ್ ಡಿಜಿಟಲ್ ಆಸ್ತಿಗಳು ಮತ್ತು ಡಿಜಿಟಲ್ ಸ್ಪೇಸ್ ಗೆ ವ್ಯಾಪಕ ವ್ಯಾಖ್ಯಾನಗಳನ್ನು ನೀಡಲಾಗಿದೆ. ಐಟಿಆರ್ ಫಾರ್ಮ್ ಗಳು ಮತ್ತು ತ್ರೈಮಾಸಿಕ ಟಿಡಿಎಸ್ ಫಾರ್ಮ್ ಗಳನ್ನು ಹೆಚ್ಚು ಸರಳ ಮತ್ತು ಸುಲಭವಾಗಿ ಅರ್ಥವಾಗುವಂತೆ ಮರು ವಿನ್ಯಾಸಗೊಳಿಸಲಾಗಿದೆ ಎಂದ ಅವರು, ಈ ತೆರಿಗೆ ಪಾರ್ಟಿಸಿಪೆನ್ಸರ್ ಮತ್ತು ಲೆಕ್ಕ ಪರಿಶೋಧಕರು ತೆರಿಗೆಯನ್ನು ಪಾವತಿಸಲು ಸಹಾಯ ಮಾಡುತ್ತಿದ್ದಾರೆ. ಇದರ ಜತೆಗೆ ತೆರಿಗೆ ವಂಚಿತರನ್ನು ಪತ್ತೆ ಹಚ್ಚುವ ಕೆಲಸ ಕೂಡ ಮಾಡುತ್ತಿರುವುದು ಖುಷಿ ವಿಚಾರ ಎಂದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ತೆರಿಗೆ ಸಂಗ್ರಹಣೆಯನ್ನು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ವಸೂಲಿ ಮಾಡಿದ್ದೆ ಆದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ. 2047ರ ಅವಧಿಗೆ ನಮ್ಮ ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಇದು ನಮ್ಮ ದೇಶ ಎಂಬ ಅಭಿಯಾನ ಎಲ್ಲರ ಮೇಲು ಇರಬೇಕು ಎಂದರು.
ಇದೇ ವೇಳೆ ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪ್ರಾಕ್ಟಿಶನರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿಯೋಜಿತ ಅಧ್ಯಕ್ಷ ಸಿಎ. ಎಸ್. ವೆಂಕಟರಮಣಿ ಮಾತನಾಡಿ, ಎಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಇಂದು ಅಧ್ಯಕ್ಷ ಸ್ಥಾನ ನೀಡಿದ್ದೀರಿ. ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇನೆ. ನಾನು ಈ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದೇನೆ. ಜ್ಞಾನ ಮತ್ತು ವಿವಿಧ ಕಂಪನಿಗಳ ಜತೆಗೆ ಸಹಕಾರವನ್ನು ನಾನು ಬಯಸುತ್ತೇನೆ ಎಂದು ಭರವಸೆ ನೀಡಿದರು.
ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪ್ರಾಕ್ಟಿಶನರ್ ನಿಕಟಪೂರ್ವಾಧ್ಯಕ್ಷ ಸಮೀರ್ ಎಸ್ ಜೆನ್ನಿ, ಕೆ ಎಸ್ ಸಿ ಎ ಎ ಅಧ್ಯಕ್ಷ ಸಿಎ ಶಿವಪ್ರಕಾಶ್ ವಿರಕ್ತಮಠ, ಬೆಂಗಳೂರು ಶಾಖೆಯ ಅಧ್ಯಕ್ಷ ಸಿಎ ಮಂಜುನಾಥ ಹಾಗೂ ಸಮ್ಮೇಳನದ ಅಧ್ಯಕ್ಷ ಎಫ್.ಆರ್. ಸಿಂಘ್ವಿ, ಸಮ್ಮೇಳನದ ಸಂಘಟನಾ ಸಮಿತಿಯ ಜಿ.ಎಸ್. ಪ್ರಶಾಂತ್, ರಾಘವೇಂದ್ರ ಪುರಾಣಿಕ್, ರವೀಂದ್ರ ಕೋರೆ ಮೊದಲಾದವರು ಭಾಗವಹಿಸಿದ್ದರು.

















0 comments:
Post a Comment