ಬಂಟ್ವಾಳ, ಜನವರಿ 03, 2026 (ಕರಾವಳಿ ಟೈಮ್ಸ್) : ಬ್ಯಾಂಕ್ ಶಾಖೆಯ ಜಂಟಿ ವ್ಯವಸ್ಥಾಪಕರೇ ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ನಗದು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ದುರುಪಯೋಗಪಡಿಸಿಕೊಂಡು ವಂಚಿಸಿದ ಘಟನೆ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಜಂಟಿ ವ್ಯವಸ್ಥಾಪಕ ಪುಲುಗುಜ್ಜು ನಿವಾಸಿ ಸುಬ್ರಹ್ಮಣ್ಯಂ (30) ಎಂದು ಹೆಸರಿಸಲಾಗಿದೆ. ಈತನಿಗೆ ದಿನಾಂಕ 04-09-2023 ರಿಂದ 19-12-2025 ರ ಅವಧಿಯಲ್ಲಿ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ವಹಿಸಲಾಗಿತ್ತು.
ಆರೋಪಿಯು ದಿನಾಂಕ 06-02-2024 ರಿಂದ 16-12-2025 ರವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ 70.86 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ದಿನಾಂಕ 19-12-2025 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ 55 ಸಾವಿರ ರೂಪಾಯಿ ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಹಣದ ದುರುಪಯೋಗ ಪತ್ತೆಯಾಗುತ್ತಿದ್ದಂತೆ ಡಿ 17 ರಂದು ಯಾರಿಗೂ ತಿಳಿಸದೇ ಆರೋಪಿ ತೆರಳಿರುತ್ತಾನೆ. ಒಟ್ಟು ವಂಚನೆಯ ಮೌಲ್ಯ 71.41 ಲಕ್ಷ ರೂಪಾಯಿ ಆಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕ ಸಿವಿಎಸ್ ಚಂದ್ರಶೇಖರ್ ಜೆಪ್ಪು ಮಂಗಳೂರು (50) ಅವರು ಡಿ 23 ರಂದು ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



















0 comments:
Post a Comment