ಬಂಟ್ವಾಳ, ಫೆಬ್ರವರಿ 16, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಉರುಳಿ ಬಿದ್ದು ಮಹಿಳೆ ಮೃತಪಟ್ಟು, ಅಟೋ ರಿಕ್ಷಾ ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಪುದು ಗ್ರಾಮ ಕಡೆಗೋಳಿ ಎಂಬಲ್ಲಿ ಭಾನುವಾರ ಸಂಭವಿಸಿದೆ.
ಮೃತರನ್ನು ಮಂಗಳೂರು-ಕಾವೂರು ನಿವಾಸಿ ವಿಶಾಲಾಕ್ಷಿ ಎಂದು ಹೆಸರಿಸಲಾಗಿದ್ದು, ಗಾಯಗೊಂಡವರನ್ನು ಅಟೋ ರಿಕ್ಷಾ ಚಾಲಕ ಹೇಮಪ್ರಕಾಶ್, ವೇದಾವತಿ, ಶ್ರೀಕಾ ಆರ್ ಕೊಟ್ಟಾರಿ ಹಾಗೂ ಧನ್ವಿತ್ ಎಂದು ಹೆಸರಿಸಲಾಗಿದೆ.
ಕಾವೂರು ನಿವಾಸಿ ವೇದಾವತಿ ಅವರು ಪುತ್ರಿ ಶ್ರೀಕಾ ಆರ್ ಕೊಟ್ಟಾರಿ, ಪುತ್ರ ಧನ್ವಿತ್ ಹಾಗೂ ಅಕ್ಕ ವಿಶಾಲಾಕ್ಷಿ ಅವರೊಂದಿಗೆ ಭಾವ ಹೇಮ ಪ್ರಕಾಶ್ ಅವರ ಅಟೋ ರಿಕ್ಷಾದಲ್ಲಿ ಕಲ್ಲಡ್ಕ ಬಳಿಯ ಶಿವರಾತ್ರಿ ಪೂಜೆಗೆಂದು ಮಂಗಳೂರಿನಿಂದ ಕಲ್ಲಡ್ಕ ಕಡೆಗೆ ಅಟೋ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ವೇಳೆ ಕಡೆಗೋಳಿ ಜಂಕ್ಷನ್ನಿನಲ್ಲಿರುವ ತೆರೆದ ಡಿವೈಡರ್ ಕಡೆಯಿಂದ ಪೊಳಲಿ ದ್ವಾರದ ಕಡೆಗೆ ಸವಾರಿ ಮಾಡಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಂಟೋನಿ ಮಾರ್ಕ್ ಎಂಬವರು ಸವಾರು ಮಾಡಿಕೊಂಡು ಬಂದ ಸ್ಕೂಟರ್ ಹೇಮ ಪ್ರಕಾಶ್ ಚಲಾಯಿಸುತ್ತಿದ್ದ ಅಟೋ ರಿಕ್ಷಾಕ್ಕೆ ಮುಂದಿನಿಂದ ಡಿಕ್ಕಿ ಹೊಡೆದಿದ್ದು, ಈ ಸಂದರ್ಭ ಅಟೋ ಚಾಲಕ ನಿಯಂತ್ರಣ ಮೀರಿ ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಇನ್ನೊಂದು ಅಟೋ ರಿಕ್ಷಾಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಅಪಘಾತದಿಂದ ಗಾಯಗೊಂಡವರನ್ನು ಸ್ಥಳೀಯರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ಗಂಭೀರ ಗಾಯಗೊಂಡಿದ್ದ ವಿಶಾಲಾಕ್ಷಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment