ಬಂಟ್ವಾಳ, ಫೆಬ್ರವರಿ 25, 2026 (ಕರಾವಳಿ ಟೈಮ್ಸ್) : ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಸಮೀಪದ ಮೈತ್ರೇಯಿ ಗುರುಕುಲಂ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ-ಲೆನಿನ್ ವಾದಿ) ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಫೆ 25 ರಂದು ಜಿಲ್ಲಾ ಎಸ್ಪಿ ಅವರಿಗೆ ಲಿಖಿತ ಮನವಿ ನೀಡಿ ಆಗ್ರಹಿಸಿದೆ.
ಮೂಲತಃ ಬೆಂಗಳೂರು ಮೂಲದ, ಇಲ್ಲಿನ ಗುರುಕುಲಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷ ಪ್ರಾಯದ ವೈಗಲಕ್ಷ್ಮಿ ಎಂಬಾಕೆ ಫೆ 15 ರಂದು ನಾಪತ್ತೆಯಾಗಿ ಬಳಿಕ ಇಲ್ಲಿನ ಕೆರೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ವಿದ್ಯಾರ್ಥಿನಿಯ ಸಾವಿನಲ್ಲಿ ಹಲವು ಸಂಶಯಗಳಿದ್ದು, ಈಕೆಯ ಡೆತ್ ನೋಟ್ ಪೊಲೀಸರ ಬಳಿಯಿದೆ. ಘಟನೆ ಬಗ್ಗೆ ಪೊಲೀಸರು ಎಫ್ ಐ ಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಿದ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಆಗ್ರಹಿಸಿರುವ ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಅವರು ಬಾಲಕಿಯ ತಂದೆ ಸಹಿತ ಗುರುಕುಲಂನ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ತನಿಖೆಗೊಳಪಡಿಸಿ ಮೃತ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವಂತೆ ಲಿಖಿತ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಮೋಹನ್ ಕೆ ಇ, ಮುಹಮ್ಮದ್ ಅನ್ಸಾರ್ ಬಜಾಲ್ ಜೊತೆಗಿದ್ದರು.















0 comments:
Post a Comment