ಬಂಟ್ವಾಳ, ಫೆಬ್ರವರಿ 04, 2026 (ಕರಾವಳಿ ಟೈಮ್ಸ್) : ಅಡಿಕೆ ತೋಟದಲ್ಲಿದ್ದ ಬೋರ್ ವೆಲ್ ದುರಸ್ತಿ ಮಾಡಲು ಬಂದಿದ್ದ ಬೋರ್ ವೆಲ್ ರಿಗ್ ವಾಹನದಿಂದ ಡ್ರಿಲ್ ಯಂತ್ರವನ್ನು ಕೆಳಗಿಳಿಸುವ ವೇಳೆ ಯಂತ್ರವು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಬೋರ್ ವೆಲ್ ಕೊರೆಯುವ ಲಾರಿಯ ಬದಿಯಲ್ಲಿ ನೀರಿನಲ್ಲಿ ನಿಂತಿದ್ದ ಕಾರ್ಮಿಕ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ಫೆಬ್ರವರಿ 3 ರಂದು ಸಂಭವಿಸಿದೆ.
ಮೃತ ಕಾರ್ಮಿಕನನ್ನು ಛತ್ತೀಸ್ ಘರ್ ಮೂಲದ ಹೆಲ್ಪರ್ ಶಿವ ಎಕ್ಕ (33) ಎಂದು ಹೆಸರಿಸಲಾಗಿದೆ. ಪುತ್ತಿಲ ನಿವಾಸಿ ರಫೀಕ್ ಕೆ (50) ಅವರ ತಂದೆಯ ಬಾಬ್ತು ಬೆಳ್ತಂಗಡಿ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿರುವ ಅಡಿಕೆ ತೋಟದಲ್ಲಿದ್ದ ಹಾಳಾಗಿದ್ದ ಬೋರ್ ವೆಲ್ ದುರಸ್ತಿ ಮಾಡಲು ಫೆಬ್ರವರಿ 3 ರಂದು ಬೆಳಿಗ್ಗೆ ಹಮೀದ್ ಎಂಬವರ ಮಾಲಕತ್ವದ ಕೆಎ01 ಎಂಎನ್8479 ನೋಂದಣಿ ಸಂಖ್ಯೆಯ ಬೋರ್ ವೆಲ್ ರಿಗ್ ವಾಹನದಲ್ಲಿ ಬೋರ್ ವೆಲ್ ರಿಪೇರಿ ಮಾಡಿಸಿದಾಗ ಸ್ಥಳದಲ್ಲಿ ನೀರು ತುಂಬಿಕೊಂಡಿದ್ದು, ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಮೇಲಿನಿಂದ ವಿದ್ಯುತ್ ತಂತಿ ಹಾದು ಹೋಗಿದ್ದು, ಇದನ್ನು ಗಮನಿಸದ ಆಪರೇಟರ್ ಸಂಪತ್ ಕುಮಾರ್ ಅವರು ಲಾರಿಯಿಂದ ಡ್ರಿಲ್ ಯಂತ್ರ ಮೇಲಿನಿಂದ ಕೆಳಗೆ ಇಳಿಸುವಾಗ ಯಂತ್ರವು ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಬೋರ್ ಕೊರೆಯುವ ಯಂತ್ರದ ಲಾರಿಯ ಬದಿಯಲ್ಲಿ ನೀರಿನಲ್ಲಿ ನಿಂತಿದ್ದ ಹೆಲ್ಪರ್ ಶಿವ ಎಕ್ಕ ಅವರಿಗೆ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಅವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment