ಬಂಟ್ವಾಳ, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಮನೆಮಂದಿ ಬೆಂಗಳೂರಿಗೆ ತೆರಳಿ ವಾಪಾಸು ಬರುವಷ್ಟರಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ಹಣವನ್ನು ಕಳವುಗೈದ ಘಟನೆ ಕಾವಳಮೂಡೂರು ಗ್ರಾಮದಲ್ಲಿ ಫೆ 28 ರಂದು ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಇಬ್ರಾಹಿಂ ಕೈಲಾರ್ (50) ಎಂಬವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಇಬ್ರಾಹಿಂ ಅವರು ಫೆ 24 ರಂದು ಬೆಳಗ್ಗೆ 6.45 ಗಂಟೆಗೆ ಮನೆಯಿಂದ ಮಗಳ ಮನೆಗೆಂದು ಬೆಂಗಳೂರಿಗೆ ಹೊರಟಿದ್ದರು. ಹೋಗುವ ಸಮಯ ಕಳೆದ ವರ್ಷ ಮಗಳ ಮದುವೆಯ ಸಮಯ ಖರೀದಿ ಮಾಡಿದ್ದ ಚಿನ್ನಾಭರಣಗಳನ್ನು ಮತ್ತು ಅವಳಿಗೆ ಉಡುಗೊರೆಯಾಗಿ ಕೊಟ್ಟಿದ್ದ ಚಿನ್ನದ ಸುಮಾರು 10 ಪವನಿನ ಗುಲಾಬಿ ಬಣ್ಣದ ಮತ್ತು ಹಸಿರು ಕಲ್ಲುಗಳಿರುವ ಡಿಸೈನ್ ಹಾರ ಮತ್ತು ಆಕೆಯ ಗಂಡನ ಮನೆಯವರು ಉಡುಗೊರೆಯಾಗಿ ಕೊಟ್ಟ ಸುಮಾರು 5 ಮುಕ್ಕಾಲು ಪವನ್ ತೂಕದ ಚಿನ್ನದ ನೆಕ್ಲೆಸ್ ಗಳನ್ನು ಮನೆಯ ಬೆಡ್ ರೂಮಿನಲ್ಲಿರುವ ಕಪಾಟಿನ ಡ್ರವರಿನಲ್ಲಿ ಭದ್ರಪಡಿಸಿಟ್ಟು, ಇನ್ನೊಂದು ಬೆಡ್ ರೂಮಿನ ಕಪಾಟಿನಲ್ಲಿ ಹೆಂಡತಿಯ ಹ್ಯಾಂಡ್ ಬ್ಯಾಗಿನಲ್ಲಿ 60 ಸಾವಿರ ರೂಪಾಯಿ ನಗದು ಹಣವನ್ನು ಇರಿಸಿ ಮನೆಯ ಬಾಗಿಲು ಭದ್ರಪಡಿಸಿ ಬೀಗ ಹಾಕಿ ಹೋಗಿದ್ದರು.
ಫೆ 28 ರಂದು ಬೆಂಗಳೂರಿನಿಂದ ಮನೆಗೆ ಬರುವ ಸಮಯ ಬೆಳಗ್ಗೆ 11 ಗಂಟೆಗೆ ಕಾವಳಕಟ್ಟೆ ಅಂಚೆ ಕಚೇರಿಯ ಪೆÇೀಸ್ಟ್ ಮ್ಯಾನ್ ಆನಂದ ಅವರು ಅವರ ಮನೆಗೆ ಪೆÇೀಸ್ಟ್ ನೀಡಲು ಬಂದಾಗ ಮನೆಯಲ್ಲಿ ಯಾರೂ ಇಲ್ಲದೇ ಇದ್ದು, ಬಾಗಿಲು ಸ್ವಲ್ಪ ತೆರೆದಿರುವುದು ಕಂಡು ಅವರು ಇಬ್ರಾಹಿಂ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಇಬ್ರಾಹಿಂ ಅವರು ಪಕ್ಕದ ಮನೆಯ ಉನೈಸ್ ಅವರಿಗೆ ವಿಚಾರ ತಿಳಿಸಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮನೆ ಮುಂಬಾಗಿಲ ಸೆಂಟರ್ ಲಾಕ್ ಮುರಿದು ಒಳಪ್ರವೇಶಿಸಿರುವುದು ಕಂಡು ಬಂದಿರುವುದಾಗಿ ತಿಳಿಸಿರುತ್ತಾನೆ.
ಸಂಜೆ ಇಬ್ರಾಹಿಂ ಅವರು ಮನೆಗೆ ತಲುಪಿ ನೋಡಿದಾಗ ಮನೆಯ ಮುಂಬಾಗಿಲು ಮುರಿದಿರುವುದು ಕಂಡು ಬಂದಿದ್ದು, ಒಳಗಡೆ ಹೋಗಿ ನೋಡಿದಾಗ ಮನೆಯ ಬೆಡ್ ರೂಮಿನಲ್ಲಿದ್ದ ಕಪಾಟಿನ ಡ್ರವರಿನ ಲಾಕ್ ಮುರಿದು ಅದರಲ್ಲಿದ್ದ ಅವರ ಮಗಳ ಬಾಬ್ತು ಚಿನ್ನದ ಒಡವೆಗಳನ್ನು ಮತ್ತು ಹೆಂಡತಿಯ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು 7 ಲಕ್ಷ ರೂಪಾಯಿ ಮೌಲ್ಯದ ಸುಮಾರು 10 ಪವನಿನ ಗುಲಾಬಿ ಬಣ್ಣ ಹಾಗೂ ಹಸಿರು ಕಲ್ಲುಗಳಿರುವ ಡಿಸೈನ್ ಹಾರ, 4 ಲಕ್ಷ ರೂಪಾಯಿ ಮೌಲ್ಯದ ಐದೂ ಮುಕ್ಕಾಲು ಪವನಿನ ಚಿನ್ನದ ನೆಕ್ಲೆಸ್ ಸಹಿತ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 60 ಸಾವಿರ ರೂಪಾಯಿ ಹಣ ಕಳವುಗೈದಿದ್ದಾರೆ. ಈ ಬಗ್ಗೆ ಇಬ್ರಾಹಿಂ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment