ಮಂಗಳೂರು, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ಬಿಸುತ್ತಿದ್ದ ಇಬ್ಬರು ಖದೀಮರನ್ನು ಕಂಕನಾಡಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೆರ್ಮನ್ನೂರು, ಪಿಲಾರು ಹೊಸಗದ್ದೆ ಮನೆ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40) ಹಾಗೂ ಪೆರ್ಮನ್ನೂರು-ಪಿಲಾರು ನಿವಾಸಿ ದಿವಂಗತ ಹುಸೇನ್ ಎಂಬವರ ಪುತ್ರ ನಜರತ್ ಅಲಿ (37) ಎಂದು ಹೆಸರಿಸಲಾಗಿದೆ.
ಭಾನುವಾರ (ಎಪ್ರಿಲ್ 19) ಮಂಗಳೂರು ನಗರ ಜೆಪ್ಪಿನ ಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಬರುತ್ತಿರುವುದಾಗಿ ಕಂಕನಾಡಿ ನಗರ ಪೆÇಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಕೆಎ 70 ಕೆ 3333 ನೋಂದಣಿ ಸಂಖ್ಯೆಯ ಬಜಾಜ್ ಫ್ರೀಡಂ ಬೈಕಿನಲ್ಲಿ ಎಂಡಿಎಂಎ ಇಟ್ಟುಕೊಂಡು ಬರುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ 46.50 ಲಕ್ಷ ರೂಪಾಯಿ ಮೌಲ್ಯದ 465.8 ಗ್ರಾಂ ತೂಕದ ಬೃಹತ್ ಪ್ರಮಾಣದ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಫರ್ವೇಜ್ ಎಂಬಾತನು ಮಂಗಳೂರಿನ ಯುವ ಸಮುದಾಯ ಮತ್ತು ಕಾಲೇಜು ವಿಧ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ತಂದು ಮಂಗಳೂರು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿರುವುದನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಆರೋಪಿ ಫರ್ವೇಜ್ ಎಂಬಾತನ ವಿರುದ್ದ ಈಗಾಗಲೇ ಪಾಂಡೇಶ್ವರ, ವಾಮಂಜೂರು, ಬಂದರು ಪೆÇಲೀಸ್ ಠಾಣೆ, ಬೆಂಗಳೂರಿನ ಅಮೃತಹಳ್ಳಿ ಮತ್ತು ಉಡುಪಿ ಸೆನ್ ಪೆÇಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಈತನು ರೂಢಿಗತ ಡ್ರಗ್ ಪೆಡ್ಲರ್ ಆಗಿರುತ್ತಾನೆ. ಈತನ ಸ್ನೇಹಿತ ನಜರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಾ ಈ ಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.












0 comments:
Post a Comment