ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿಗೆ ಅಕ್ರಮ ಪ್ರವೇಶಗೈದ ವ್ಯಕ್ತಿಯೋರ್ವ ಜಮೀನಿಗೆ ಸಂಬಂಧಪಟ್ಟವರಿಗೆ ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿರುವ ಘಟನೆ ಸಜಿಪನಡು ಗ್ರಾಮದ ಅಂಕದಕೋಡಿ ಎಂಬಲ್ಲಿ ಎಪ್ರಿಲ್ 6 ರಂದು ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ನಿವಾಸಿ, ಜಮೀನಿನ ಮಾಲಕ ಕಿಶನ್ ಪ್ರಸಾದ್ (47) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ಜನವರಿ 9 ರಂದು ಸಜಿಪನಡು ಗ್ರಾಮದ ಸರ್ವೆ ನಂಬ್ರ 10/11 ರಲ್ಲಿ 0.10 ಎಕ್ರೆ ಸ್ಥಿರಾಸ್ತಿಯನ್ನು ಖಂಡಿತ ಕ್ರಮ ಪತ್ರದ ಮೂಲಕ ಖರೀದಿಸಿದ್ದು ಸದ್ರಿ ಕ್ರಯ ಪತ್ರದ ಪ್ರಕಾರ ಖಾಸಾ ಸ್ವಾಧೀನ ಹೊಂದಿ ಅನುಭವಿಸಿಕೊಂಡು ಬರುತ್ತಿದ್ದಾರೆ. ಎಪ್ರಿಲ್ 6 ರಂದು ಬೆಳಿಗ್ಗೆ 9.30 ಗಂಟೆಗೆ ಕಿಶನ್ ಪ್ರಸಾದ್ ಅವರ ಮಾವ ಶಿವಪ್ರಸಾದ್ ನಾಯ್ಕ ಮತ್ತು ಪಾಲಾಕ್ಷ ನಾಯ್ಕ ಅವರು ಸದ್ರಿ ಜಮೀನಿನಲ್ಲಿ ಕೃಷಿ ಕೆಲಸಗಳನ್ನು ಮಾಡುತ್ತಿರುವ ವೇಳೆ ಜಗದೀಶ್ ಎಂಬವರು ಜಮೀನಿಗೆ ಅಕ್ರಮ ಪ್ರವೇಶಗೈದು ಜಮೀನಿನಲ್ಲಿದ್ದ ಅಡಿಕೆ ಸಸಿ ಕಿತ್ತೆಸೆದು ಕೃಷಿ ಹಾಳು ಮಾಡಿದ್ದಾನೆ. ಈ ಸಂದರ್ಭ ಶಿವಪ್ರಸಾದ್ ನಾಯ್ಕ್ ಅವರು ಯಾಕೆ ಕೃಷಿ ಹಾಳು ಮಾಡುತ್ತೀರಿ ಎಂದು ಕೇಳಿದಾಗ ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಈ ಸ್ಥಳದಲ್ಲಿ ಯಾಕೆ ಕೃಷಿ ಮಾಡುತ್ತೀರಿ ಎಂದು ಹಲ್ಲೆ ನಡೆಸಲು ಪ್ರಯತ್ನಿಸಿ ಮುಂದಕ್ಕೆ ಈ ಜಮೀನಿನಲ್ಲಿ ಕೃಷಿ ಮಾಡಿದರೆ ನಿಮ್ಮನ್ನು ಕಡಿದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಕೃಷಿಯನ್ನು ಹಾಳು ಮಾಡಿರುವುದರಿಂದ ಸುಮಾರು 10 ಸಾವಿರ ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment