ಬಂಟ್ವಾಳ, ಎಪ್ರಿಲ್ 12, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪಟ್ಟಣದ ಡಾ ಅಂಬೇಡ್ಕರ್ ಭವನದ ಆವರಣದ ಬಳಿ ಮೊಟ್ಟೆ ಸಿಪ್ಪೆ ಸಹಿತ ಇರುವ ತ್ಯಾಜ್ಯ ರಾಶಿ ಎಸೆಯಲಾಗಿದ್ದು, ನಗರದ ಸ್ವಚ್ಛತೆಗೆ ಸವಾಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬಿ ಸಿ ರೋಡಿನ ತಾಲೂಕು ಪಂಚಾಯತ್ ಕಚೇರಿಯ ರಸ್ತೆಯ ಅಂಬೇಡ್ಕರ್ ಭವನದ ಆವರಣ ಗೋಡೆಯ ಹೊರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮೊಟ್ಟೆ ಸಿಪ್ಪೆ ಸಹಿತ ಇರುವ ತ್ಯಾಜ್ಯದ ರಾಶಿ ಹಾಕಿರುವುದು ಕಂಡು ಬರುತ್ತಿದೆ.
ಸಮೀಪದ ಹೋಟೆಲುಗಳಿಂದ ಇಲ್ಲಿ ತ್ಯಾಜ್ಯ ತಂದು ರಾಶಿ ಹಾಕಲಾಗಿದೆಯೋ ಅಥವಾ ಮನೆಗಳಿಂದಲೋ ಅಥವಾ ಇನ್ಯಾವುದೋ ಮಂದಿ ತಂದು ಹಾಕಲಾಗಿದೆಯೋ ಎಂಬುದು ಯಾರಿಗೂ ತಿಳಿದಿಲ್ಲ. ಇಲ್ಲಿ ಸಮೀಪದಲ್ಲೇ ಬಂಟ್ವಾಳ ಶಾಸಕರ ಕಚೇರಿಯೂ ಇದೆ. ಸ್ವಲ್ಪ ಮುಂದಕ್ಕೆ ಹೋದರೆ ಬಂಟ್ವಾಳ ತಾಲೂಕು ಪಂಚಾಯತ್ ಕಟ್ಟಡವಿದೆ. ಈ ಕಡೆ ಬಂದರೆ ಕೃಷಿ ಇಲಾಖೆ, ಕೃಷಿಕ ಸಮಾಜ ಭವನ, ಇನ್ನೊಂದು ಭಾಗದಲ್ಲಿ ಸ್ತ್ರೀಶಕ್ತಿ ಭವನ, ಗ್ರಂಥಾಲಯ, ನ್ಯಾಯವಾದಿಗಳ ಸಂಕೀರ್ಣ ಇರುವ ಕಟ್ಟಡ ಸಹಿತ ಹಲವು ಜನೋಪಯೋಗಿ ಪರಿಸರ ಇದಾಗಿದೆ. ಪ್ರತಿನಿತ್ಯವೂ ಇಲ್ಲಿ ನೂರಾರು ಸಂಖ್ಯೆಯಲ್ಲಿ ಜನರ ಓಡಾಟ ಇರುವ ಪ್ರದೇಶವಾಗಿದೆ. ಇಂತಹ ಪ್ರಮುಖ ಸ್ಥಳದಲ್ಲಿ ತ್ಯಾಜ್ಯ ತಂದು ರಾಶಿ ಹಾಕಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಿ ದಂಡ ವಿಧಿಸಬೇಕು ಎಂಬುದು ಇಲ್ಲಿನ ಪ್ರಜ್ಞಾವಂತ ಜನರ ಆಗ್ರಹವಾಗಿದೆ. ಇನ್ನೇನು ಒಂದೆರಡು ದಿನಗಳ ಅಂತರದಲ್ಲಿ ಅಂದರೆ ಎಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವೂ ಸರಕಾರಿ ಮಟ್ಟದಲ್ಲಿ ನಡೆಯಲಿದ್ದು, ಇದೂ ಕೂಡಾ ಇದೇ ಡಾ ಅಂಬೇಡ್ಕರ್ ಭವನದಲ್ಲೇ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಸಂವಿಧಾನ ಶಿಲ್ಪಿ ಜಯಂತಿ ಕಾರ್ಯಕ್ರಮಕ್ಕೆ ಮುಂಚಿತವಾಗಿ ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ವಾಸಿಗಳು ಆಗ್ರಹಿಸಿದ್ದಾರೆ.





















0 comments:
Post a Comment