ಬೆಲೆ ಏರಿಕೆ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಬಂಟ್ವಾಳದಲ್ಲಿ ಕೈ ಪ್ರತಿಭಟನೆ
ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ ಎಸ್ ಯು ಐ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನಾ ಸಭೆ ಬಿ ಸಿ ರೋಡು ಜಂಕ್ಷನ್ನಿನ ರಕ್ತೇಶ್ವರಿ ದೇವಸ್ಥಾನ ಮುಂಭಾಗದಲ್ಲಿ ಮೇ 25 ರಂದು ಸೋಮವಾರ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರು, ಕೇಂದ್ರ ಸರಕಾರದ ಜನವಿರೋಧಿ ನೀತಿ-ನಿಯತ್ತಿಲ್ಲದ ಆಡಳಿತದ ವಿರುದ್ದ ಜನ ತೀರ್ಮಾನ ಕೈಗೊಳ್ಳಬೇಕು ಎಂದರು. ಜನವಿರೋಧಿ ನೀತಿಗಳ ವಿರುದ್ದ ಸಾಮಾಜಿಕ ಜಾಲ ತಾಣಗಳ ಮೂಲಕ ವಿಡಂಬನಾತ್ಮಕ ಪ್ರತಿಭಟನೆ ಕೈಗೊಂಡಿರುವ ವ್ಯವಸ್ಥೆಯನ್ನು ಕೂಡಾ ಸರಕಾರ ಬ್ಲಾಕ್ ಮಾಡುವ ಮೂಲಕ ಜನಾಭಿಪ್ರಾಯವನ್ನು ದಮನಿಸುವ ಕಾರ್ಯ ಮಾಡುತ್ತಿರುವುದು ತೀರಾ ನಾಚಿಕೆಯ ಸಂಗತಿ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಭಿಯಾನಕ್ಕೆ ಸರಕಾರ ಹೆದರಿದೆ ಎಂದು ಲೇವಡಿ ಮಾಡಿದರು.
ಕೇಂದ್ರ ಸರಕಾರದ ಜನವಿರೋಧಿ ಆಡಳಿತ ಹಾಗೂ ಸುಳ್ಳು ಆಶ್ವಾಸನೆ-ಭರವಸೆಗಳ ವಿರುದ್ದ ಕೇವಲ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡು ಪ್ರತಿಭಟನೆ ನಡೆಸಿದರೆ ಸಾಲದು, ಮನೆ ಮನೆಗಳಿಗೆ, ಜನರ ಕಾಲಡಿಗೆ ತೆರಳಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಕಾರ್ಯಕರ್ತರು ಕಟಿಬದ್ದರಾಗಬೇಕು ಎಂದ ರೈ, ಬೆಲೆ ಏರಿಕೆ ನಿಯಂತ್ರಿಸಲಾದ ನರೇಂದ್ರ ಮೋದಿ ಅವರು, ವಾಹನ ಬಳಕೆ, ಚಿನ್ನ ಬಳಕೆಯ ನಿಯಂತ್ರಣದ ಬಗ್ಗೆ ಪುಕ್ಕಟೆ ಸಲಹೆ ನೀಡುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರಿದ್ದು, ಈ ಬಗ್ಗೆ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡಬೇಕು ಎಂದು ರಮಾನಾಥ ರೈ ಇದೇ ವೇಳೆ ಆಗ್ರಹಿಸಿದರು.
ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಕ್ತಾರ ಎಂ ಜಿ ಹೆಗ್ಡೆ, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಕೆ ಇಬ್ರಾಹಿಂ ನವಾಝ್, ಪದ್ಮನಾಭ ರೈ, ಬಿ ವಾಸು ಪೂಜಾರಿ, ಬಿ ಪದ್ಮಶೇಖರ ಜೈನ್, ಸದಾಶಿವ ಬಂಗೇರ, ಉಮೇಶ್ ಬೋಳಂತೂರು, ಎ ಬಿ ಅಬ್ದುಲ್ಲ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಯೂಸುಫ್ ಕರಂದಾಡಿ, ಜೆಸಿಂತಾ ಡಿಸೋಜ, ಸಿದ್ದೀಕ್ ಸರವು, ಮುಹಮ್ಮದ್ ನಂದಾವರ, ಜೋಸ್ಪಿನ್ ಡಿಸೋಜ, ಶೈಲಜಾ ರಾಜೇಶ್, ಉಮ್ಮರ್ ಸಾಲೆತ್ತೂರು, ಸಮದ್ ಕೈಕಂಬ, ಸಿರಾಜ್ ಮದಕ, ಸುಧಾಕರ ಶೆಣೈ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.











0 comments:
Post a Comment