ಮಂಗಳೂರು, ಜೂನ್ 26, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಗರ್ಭಿಣಿ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ. ತನಿಖೆಯಲ್ಲಿ ಡಿಎನ್ಎ ಸೇರಿದಂತೆ ಪ್ರಮುಖ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿದ್ದು, ಪೆÇಲೀಸರು ತಮ್ಮ ಕರ್ತವ್ಯವನ್ನು ಕಾನೂನು ಬದ್ಧವಾಗಿ ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೇ ಕೆಲವರು ಸಂತ್ರಸ್ತೆಗೆ ನ್ಯಾಯ ದೊರಕಬೇಕೆಂದು ಧ್ವನಿ ಎತ್ತುತ್ತಿದ್ದಾರೆ ಎಂದು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೇಳಿದ್ದಾರೆ.
ಆದರೆ, ಅಪರಾಧಗಳ ಬಗ್ಗೆ ಶ್ವನಿ ಎತ್ತುವುದರಲ್ಲಿ ಸಮಾಜದಲ್ಲಿ ಭಿನ್ನ ಪ್ರತಿಕ್ರಿಯೆ ಕಂಡು ಬರುತ್ತಿರುವ ಬಗ್ಗೆ ಕಮಿಷನರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಯು ಬೇರೆ ಸಮುದಾಯಕ್ಕೆ ಸೇರಿದವನಾಗಿದ್ದರೆ ನ್ಯಾಯಕ್ಕಾಗಿ ಬಲವಾದ ಧ್ವನಿ ಕೇಳಿಬರುತ್ತದೆ. ಆದರೆ ಆರೋಪಿಯು ಅದೇ ಸಮುದಾಯದವನಾಗಿದ್ದರೆ ನ್ಯಾಯದ ಕೂಗು ಬಲವಾಗಿ ಕೇಳಿ ಬರುವುದಿಲ್ಲ. ಇಂತಹ ತಾರತಮ್ಯದ ಧೋರಣೆ ನ್ಯಾಯದ ಮೇಲಿನ ಬದ್ಧತೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ. ಸಂತ್ರಸ್ತೆಯ ನೋವನ್ನು ವಿಭಜಿಸಿ ನೋಡುವ ಬದಲು ನಿಜವಾದ ನ್ಯಾಯ ಮತ್ತು ಹೊಣೆಗಾರಿಕೆಗೆ ಆದ್ಯತೆ ಕೊಟ್ಟು ನೋಡಬೇಕಿದೆ ಎಂದವರು ಹೇಳಿದ್ದಾರೆ.
ನಿಜವಾಗಿಯೂ ನ್ಯಾಯವನ್ನು ಬಯಸುವುದಾದರೆ, ಆರೋಪಿಯ ಧರ್ಮ, ಜಾತಿ ಅಥವಾ ಸಮುದಾಯವನ್ನು ನೋಡದೆ ಪ್ರತಿಯೊಬ್ಬ ಆರೋಪಿಗೂ ಒಂದೇ ಮಾನದಂಡ ಅನ್ವಯಿಸಬೇಕು. ಅಪರಾಧಕ್ಕೆ ಯಾವುದೇ ಧರ್ಮ ಅಥವಾ ಸಮುದಾಯವಿಲ್ಲ. ಪ್ರತಿಯೊಂದು ಸಮುದಾಯದಲ್ಲೂ ಕಾನೂನು ಪಾಲಿಸುವವರೂ ಇದ್ದಾರೆ, ಅಪರಾಧ ಎಸಗುವವರೂ ಇರಬಹುದು. ಆದ್ದರಿಂದ ನ್ಯಾಯವು ವ್ಯಕ್ತಿಯ ಗುರುತಿನ ಆಧಾರದ ಮೇಲೆ ಇರದೆ ಸಾಕ್ಷ್ಯಾಧಾರ ಮತ್ತು ಕಾನೂನಿನ ಆಧಾರದ ಮೇಲೆ ನಡೆಯಬೇಕು ಎಂದು ಕಮಿಷನರ್ ಹೇಳಿದ್ದಾರೆ.















0 comments:
Post a Comment