ಬೆಳ್ತಂಗಡಿ, ಜೂನ್ 21, 2026 (ಕರಾವಳಿ ಟೈಮ್ಸ್) : ಮನೆಯೊಡತಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಕಳವುಗೈದ ಘಟನೆ ಕನ್ಯಾಡಿ ಎಂಬಲ್ಲಿ ಜೂನ್ 20 ರಂದು ಹಾಡಹಗಲೇ ಸಂಭವಿಸಿದೆ.
ಇಲ್ಲಿನ ನಿವಾಸಿ ಜಯಶ್ರೀ (32) ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಇವರು ಜೂನ್ 20 ರಂದು ಶನಿವಾರ ಬೆಳಿಗ್ಗೆ ತನ್ನ ಮನೆಗೆ ಬೀಗ ಹಾಕಿ, ಕೀಯನ್ನು ಮನೆಯ ಬಳಿಯೇ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಹಿಂತಿರುಗಿ ಬಂದಾಗ ಮನೆಯ ಕೋಣೆಯಲ್ಲಿರುವ ಗಾದ್ರೇಜ್ ಬಾಗಿಲು ತೆರೆದಿದ್ದು ಹಾಗೂ ರೂಮಿನೊಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಮನೆಯಲ್ಲಿದ್ದ ಸುಮಾರು 7.98 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಒಡವೆಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಜಯಶ್ರೀ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment