ಮಂಗಳೂರು, ಜೂನ್ 13, 2026 (ಕರಾವಳಿ ಟೈಮ್ಸ್) : ಜೂನ್ 10 ರಂದು ತೋಕೋರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ ಎಸ್ ಇ ಝಡ್ ಅವರಿಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಮೃತದೇಹ ಪತ್ತೆಯಾದ ಪ್ರಕರಣ ಬೇಧಿಸಿದ ಪಣಂಬೂರು ಪೊಲೀಸರು ಇದೊಂದು ಕೊಲೆ ಪ್ರಕರಣ ಎಂಬುದನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಬಿಹಾರ ರಾಜ್ಯದ, ಪ್ರಸ್ತುತ ತೋಕೂರು ಗ್ರಾಮದ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರ ಬಳಿ ನಿವಾಸಿ ನರ್ಶ್ ಭಂಡಾರಿ ಎಂಬವರ ಪುತ್ರ ಪ್ರಶಾಂತ್ ಕುಮಾರ್ (36) ಹಾಗೂ ಶಿವ್ ಮೆಹ್ತೋ ಎಂಬವರ ಪುತ್ರ ಪಿಂಕೋ ಮೆಹ್ತೋ (33) ಎಂದು ಹೆಸರಿಸಲಾಗಿದೆ.
ಜೂನ್ 10 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪಣಂಬೂರು ಪೆÇಲೀಸ್ ಠಾಣಾ ವ್ಯಾಪ್ತಿಯ 62ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಸೆಝ್) ರವರಿಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026 ಕಲಂ 103 (1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿ ಖಚಿತ ಮಾಹಿತಿ ಮೇರೆಗೆ ಪ್ರಕರಣದ ಆರೋಪಿಗಳ ಪೈಕಿ ಪ್ರಶಾಂತ್ ಕುಮಾರ್ ಎಂಬಾತನನ್ನು ಗೋವಾ ರಾಜ್ಯದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಹಾಗೂ ಪಿಂಕೋ ಮೆಹ್ತಾನನ್ನು ಜೋಕಟ್ಟೆಯ ಮನೆಯಲ್ಲಿ ಜೂನ್ 13 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ.
ಆರೋಪಿಗಳು ಬಿಹಾರ ರಾಜ್ಯದವರಾಗಿದ್ದು, ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ತಮ್ಮ ಸಂಸಾರದೊಂದಿಗೆ ವಾಸವಾಗಿರುತ್ತಾರೆ. 1ನೇ ಆರೋಪಿ ಪ್ರಶಾಂತ್ ಕುಮಾರನು ಎಂ.ಆರ್.ಪಿ.ಎಲ್ ನಲ್ಲಿ ವೆಲ್ಡಿಂಗ್ ಕೆಲಸವನ್ನು ಮತ್ತು 2ನೇ ಆರೋಪಿ ಪಿಂಕೂ ಮೆಹ್ತೋ ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡಿರುತ್ತಾನೆ. ಪ್ರಕರಣದಲ್ಲಿ ಮೃತಪಟ್ಟ ಅಪರಿಚಿತ ಗಂಡಸಿನ ಗುರುತು ಪತ್ತೆ ಹಚ್ಚಲಾಗಿದ್ದು ಬಿಹಾರ ಮೂಲದ ಕನ್ನಿಯಾ ಚೌಹಾನ್ ಎಂಬವರ ಪುತ್ರ ಚಂದನ್ ಚೌಹಾನ್ (39) ಎಂದು ತಿಳಿದು ಬಂದಿದೆ.
ಆರೋಪಿ ಪ್ರಶಾಂತ್ ಕುಮಾರ್ ಪತ್ನಿಯು ಕಳೆದ ಎಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನ ಜೊತೆಯಲ್ಲಿ ಮನೆ ಬಿಟ್ಟು ಹೋಗಿದ್ದು, ಆಕೆ ಮನೆ ಬಿಟ್ಟು ಹೋಗಲು ಕೊಲೆಯಾದ ಚಂದನ್ ಚೌಹಾನ್ ಸಹಾಯ ಮಾಡಿರುವುದಲ್ಲದೆ, ಆರೋಪಿ ಪ್ರಶಾಂತ್ ಕುಮಾರ್ ಅಪಘಾತವಾಗಿ ಮನೆಯಲ್ಲಿಯೇ ಇರುವುದರಿಂದ ಆಕೆಯು ಸಣ್ಣ ಹುಡುಗನ ಜೊತೆಯಲ್ಲಿ ಮನೆ ಬಿಟ್ಟು ಹೋಗಿರುವುದಾಗಿ ಚಂದನ್ ಅಲ್ಲಲ್ಲಿ ಆರೋಪಿ ಪ್ರಶಾಂತನ ಬಗ್ಗೆ ಅಪಪ್ರಚಾರ ಮಾಡಿರುವುದರಿಂದ ಸಿಟ್ಟಿಗೆದ್ದು, ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿಕೊಂಡು ಜೂನ್ 9 ರಂದು ಸಂಜೆ 6 ಗಂಟೆ ವೇಳೆಗೆ ಚಂದನ್ ತಲೆ, ಮುಖಕ್ಕೆ ದೊಣ್ಣೆಯಿಂದ ಹೊಡೆದು ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಮೃತದೇಹವನ್ನು ತನ್ನ ಜೋಕಟ್ಟೆ ಬಾಡಿಗೆ ಮನೆಯ ಪಕ್ಕದಲ್ಲಿರುವ ತೋಡಿನಲ್ಲಿ ಬಿಸಾಡಿರುವುದಾಗಿದೆ.
ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇಧಿಸುವಲ್ಲಿ ಪಣಂಬೂರು ಪೆÇಲೀಸರು ಯಶಸ್ವಿಯಾಗಿದ್ದು, ಮಂಗಳೂರು ಉತ್ತರ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ಅವರು ಪ್ರಕರಣವನ್ನು ಭೇಧಿಸಿದ್ದಾರೆ. ಪಣಂಬೂರು ಪೆÇಲೀಸ್ ಠಾಣಾ ಪಿಎಸ್ಸೈಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಂತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್, ಮಂಜುನಾಥ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.














0 comments:
Post a Comment