ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ಪಿಕಪ್ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರಿಬ್ಬರು ದಾರುಣವಾಗಿ ಮೃತಟಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಪಾಳ್ಯರ ಎಂಬಲ್ಲಿನ ಬಳ್ಳಮಂಜ-ಪಣಕಜೆ ತಿರುವು ರಸ್ತೆಯಲ್ಲಿ ಜೂನ್ 8 ರಂದು ಸಂಜೆ ಸಂಭವಿಸಿದೆ.
ಮೃತ ದ್ವಿಚಕ್ರ ಸವಾರರನ್ನು ಸ್ಕೂಟರ್ ಸವಾರ ಡಾಕಯ್ಯ ಗೌಡ ಹಾಗೂ ಚಂದಪ್ಪ ಎಂದು ಹೆಸರಿಸಲಾಗಿದೆ. ಇವರು ಕೆಎ21 ಯು4989 ನೋಂದಣಿ ಸಂಖ್ಯೆಯ ಸ್ಕೂಟರಿನಲ್ಲಿ ಪಣಜಕೆ ಕಡೆಯಿಂದ ಬಳ್ಳಮಂಜ ಕಡೆಗೆ ಸಂಚರಿಸುತ್ತಿದ್ದ ವೇಳೆ ಬಳ್ಳಮಂಜ ಕಡೆಯಿಂದ ಪಣಕಜೆ ಕಡೆಗೆ ಚಲಾಯಿಸಿಕೊಂಡು ಬಂದ ಪಿಕಪ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದಾಗಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಜಿರೆ ಎಸ್ಡಿಎಂ ಆಸ್ಪತ್ರೆಗೆ ಸಾಗಿಸಲಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪದ್ಮ ಮೂಲ್ಯ ಎಂಬವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment