ಬಂಟ್ವಾಳ, ಜೂನ್ 05, 2026 (ಕರಾವಳಿ ಟೈಮ್ಸ್) : ಬೈಕ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟು, ತಂದೆ-ತಾಯಿ ಹಾಗೂ 5 ವರ್ಷದ ಮಗು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ಸೂರಿಕುಮೇರು ಎಂಬಲ್ಲಿ ಜೂನ್ 4 ರಂದು ಸಂಜೆ ಸಂಭವಿಸಿದೆ.
ಮೃತ ಬಾಲಕಿಯನ್ನು ಬಾಳ್ತಿಲ ನಿವಾಸಿ ಹೇಮಂತ್ ಕುಮಾರ್ (45) ಹಾಗೂ ನಿಶ್ಮಿತಾ ದಂಪತಿಯ ಪುತ್ರಿ ನೈರುತಿ ಎಚ್ ಸುವರ್ಣ (10) ಎಂದು ಹೆಸರಿಸಲಾಗಿದೆ. ಹೇಮಂತ್ ಕುಮಾರ್ ಅವರು ತನ್ನ ಬೈಕಿನಲ್ಲಿ ಪತ್ನಿ ನಿಶ್ಮಿತಾ, ಮಕ್ಕಳಾದ ನೈರುತಿ ಎಚ್ ಸುವರ್ಣ ಹಾಗೂ ಸೋಹಾಣಿ ಎಚ್ ಸುವರ್ಣ (5) ಅವರನ್ನು ಕುಳ್ಳಿರಿಸಿಕೊಂಡು ಮನೆ ಕಡೆ ಬರುತ್ತಿದ್ದಾಗ ಬಾಳ್ತಿಲ ಗ್ರಾಮದ ಸೂರಿಕುಮೇರು ಸರ್ವಿಸ್ ರಸ್ತೆಯಲ್ಲಿ ಅದೇ ಮಾರ್ಗವಾಗಿ ಬಂದ ಧನರಾಜ್ ಎಂಬವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ದಂಪತಿ ಹಾಗೂ ಮಕ್ಕಳಿಗೆ ಗಾಯಗಳಾಗಿವೆ. ಅವರನ್ನು ತಕ್ಷಣ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ನೈರುತಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಆಕೆ ಜೂನ್ 4 ರಂದು ಬೆಳಗ್ಗಿನ ಜಾವ ಮೃತಪಟ್ಟಿದ್ದಾಳೆ. ಈ ಬಗ್ಗೆ ಹೇಮಂತ್ ಕುಮಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment