ಬಂಟ್ವಾಳ, ಜೂನ್ 30, 2026 (ಕರಾವಳಿ ಟೈಮ್ಸ್) : ಗೂಡಂಗಡಿ ಮುಂದೆ ಶೆಡ್ ಹಾಕಲು ಕಬ್ಬಿಣದ ಪೈಪ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಶಾಕ್ ಹೊಡೆದು ಅಂಗಡಿ ಮಾಲಕ ಮೃತಪಟ್ಟ ಘಟನೆ ಮೇರಮಜಲು ಗ್ರಾಮದಲ್ಲಿ ಜೂನ್ 28 ರಂದು ಸಂಜೆ ವೇಳೆ ಸಂಭವಿಸಿದೆ.
ಮೃತರನ್ನು ಇಲ್ಲಿನ ನಿವಾಸಿ ಎ ಇಸ್ಮಾಯಿಲ್ (58) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಪುತ್ರ ಮಹಮ್ಮದ್ ಸಫ್ವಾನ್ (33) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ತಂದೆ ಎ ಇಸ್ಮಾಯಿಲ್ ಅವರು ಜೂನ್ 28 ರಂದು ಸಂಜೆ 6.30 ರಿಂದ 7 ಗಂಟೆಯ ಮಧ್ಯದ ಅವದಿಯಲ್ಲಿ ಗೂಡಂಗಡಿಯ ಮುಂದೆ ಶೆಡ್ ನಿರ್ಮಿಸಲು 2 ಕಬ್ಬಿಣದ ಪೈಪನ್ನು ಕಟ್ ಮಾಡಿ ನೆಟ್ಟು ಇನ್ನೊಂದು 20 ಅಡಿ ಉದ್ದದ ಪೈಪನ್ನು ಮೇಲೆ ಎತ್ತಿ ಅದರಲ್ಲಿನ ಮರಳನ್ನು ತಗೆದು ಹಾಕುವ ಸಮಯ ಅಂಗಡಿಯ ಮುಂದೆ ಹಾದು ಹೋಗಿರುವ ವಿದ್ಯುತ್ ತಂತಿಗೆ ಅವರು ಮೇಲಕ್ಕೆ ಎತ್ತಿದ ಕಬ್ಬಿಣದ ಪೈಪ್ ತಾಗಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಕಾರಿನಲ್ಲಿ ಮಂಗಳೂರು-ಪಡೀಲ್ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ 9.12 ರ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.















0 comments:
Post a Comment