ಬಂಟ್ವಾಳ, ಜೂನ್ 12, 2026 (ಕರಾವಳಿ ಟೈಮ್ಸ್) : ಯೂರಿಯಾ ರಸಗೊಬ್ಬರ ಕಾನೂನು ಬಾಹಿರವಾಗಿ ಮರು ಪೊಟ್ಟಣೀಕರಿಸುತ್ತಿರುವ ಜಾಲ ಬೇಧಿಸಿರುವ ವಿಟ್ಲ ಪೊಲೀಸರು ಓರ್ವ ಆರೋಪಿ ಸಹಿತ 632 ಚೀಲ ರಸಗೊಬ್ಬರ ವಶಪಡಿಸಿಕೊಂಡ ಘಟನೆ ಕೊಳ್ನಾಡು ಗ್ರಾಮದ ಬೋಳಂತೂರು ಎಂಬಲ್ಲಿ ಜೂನ್ 11 ರಂದು ಸಂಜೆ ನಡೆದಿದೆ.
ಗುರುವಾರ ಸಂಜೆ ಯೂರಿಯಾ ರಸಗೊಬ್ಬರವನ್ನು ಕಾನೂನು ಬಾಹಿರವಾಗಿ ಮರು ಪೊಟ್ಟಣಿಕರಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ಮೊಹಮ್ಮದ್ ಅಶ್ರಫ್ ಎಂಬಾತ ತನ್ನ ಮನೆಯ ಬಳಿ, ಕೃಷಿ ಗ್ರೇಡಿನ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಬಳಕೆಗೆ ತಾಂತ್ರಿಕ ಗ್ರೇಡಿನ ಚೀಲಗಳಿಗೆ ಮರು ಪೊಟ್ಟಣಿಕರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಂದಾಜು ಒಟ್ಟು 632 ಚೀಲಗಳು ಮರು ಪೊಟ್ಟಣಿಕರಿಸಿರುವುದಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ ಶೆಣೈ ಪಿ. (ತಾಂತ್ರಿಕ) ಅವರಿಗೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೃಷಿ ನಿರ್ದೇಶಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.













0 comments:
Post a Comment