ಮಂಗಳೂರು, ಜುಲೈ 31, 2026 (ಕರಾವಳಿ ಟೈಮ್ಸ್) : 2015ನೇ ಇಸವಿಯಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ (307) ಪ್ರಕರಣದಲ್ಲಿ ನೇರ ಭಾಗಿಯಾಗಿ ದಸ್ತಗಿರಿಯಾಗದೇ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನೇಳಿ ಗ್ರಾಮದ ಮಲ್ಲೇನಹಳಿ ಅಂಚೆ ವ್ಯಾಪ್ತಿಯ ಮುಖ್ಯ ರಸ್ತೆ ಬಸ್ ನಿಲ್ದಾಣ ಬಳಿ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (34) ಎಂದು ಹೆಸರಿಸಲಾಗಿದೆ.
ಈತ 2015ರಲ್ಲಿ ಮಂಗಳೂರು ನಗರದ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಶಾಸ್ತ್ರದ ಸಂದರ್ಭದಲ್ಲಿ ಅಶೋಕ ಕುಮಾರ ಕೊಟ್ಟಾರಿ ಹಾಗೂ ಆರೋಪಿ ಜಗ್ಗು ಎಂಬವರ ನಡುವೆ ಮಾತಿನ ಚಕಮಕಿ ನಡೆದ ವಿಚಾರದಲ್ಲಿ ಪ್ರಮುಖ ಆರೋಪಿಯಾದ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷನು ಇತರ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ ಅಲಿಯಾಸ್ ನರೇಶ್ ಮತ್ತು ಜಗ್ಗು ಎಮಬವರ ಜೊತೆ ಸೇರಿಕೊಂಡು ಅಶೋಕ ಕುಮಾರ ಕೊಟ್ಟಾರಿ ಅವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯವುಂಟು ಮಾಡಿ ಕೊಲೆಯತ್ನ ನಡೆಸಿದ್ದರು. ಈ ಬಗ್ಗೆ ಕಾವೂರು ಪೆÇಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 135/2015 ರಂತೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಚುಂಕಿ ಆಕಾಶಭವನ ಎಂಬಾತನು ಪ್ರಕರಣ ದಾಖಲಾದ ದಿನದಿಂದ ದಸ್ತಗಿರಿಗೆ ಸಿಗದೇ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆತನ ವಿರುದ್ಧ 25/2025 ರಂತೆ ಎಲ್ ಪಿ ಸಿ ವಾರಂಟ್ ಹೊರಡಿಸಿತ್ತು.
ಯಾವುದೇ ಸುಳಿವು ಇಲ್ಲದ ಈತನ ಬಗ್ಗೆ ಬಹಳ ಸಮಯದಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರಿಗೆ ಈತನು ಶಿವಮೊಗ್ಗದಲ್ಲಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿಕೊಂಡು ಜುಲೈ 29 ರಂದು ಈತನನ್ನು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಈತನನ್ನು ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.











0 comments:
Post a Comment