ಬಂಟ್ವಾಳ, ಜುಲೈ 30, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆಪಿಸಿಸಿ ಸದಸ್ಯರೂ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ಆಗಿರುವ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಕೂಡಾ ಅಧ್ಯಕ್ಷಗಿರಿಗಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಧ್ಯಕ್ಷಗಿರಿ ಪಟ್ಟದ ಪ್ರಬಲ ಆಕಾಂಕ್ಷಿಗಳಲ್ಲಿ ಓರ್ವರಾಗಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಎರಡು ಬಾರಿ ತುಂಬೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿರುವ ಪ್ರಕಾಶ್ ಶೆಟ್ಟಿ ಅವರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಓರ್ವ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು, ಪಕ್ಷ ಸಂಘಟನೆ, ಜನರ ನಿಕಟ ಸಂಪರ್ಕ, ಅದರಲ್ಲೂ ಯುವ ಸಮೂಹದ ಜೊತೆ ಇರುವ ಸ್ಪಂದಾನ ಮನೋಭಾವದಿಂದಾಗಿ ಇವರು ಸದಾ ಸುದ್ದಿಯಲ್ಲಿರುವ ಓರ್ವ ಕೈ ನಾಯಕ.
ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ರಾಜಕೀಯ ಪ್ರಯಾಣದಲ್ಲಿ ಕ್ಲಿಷ್ಟಕರ ಇತಿಹಾಸ ಇದೆ. ಗ್ರಾಮ ಪಂಚಾಯತ್ ಮಟ್ಟದಿಂದ ಮೇಲೇರಿ ಬರಲು ಪ್ರಯತ್ನಿಸಿದ್ದ ಚಂದ್ರಪ್ರಕಾಶ್ ಶೆಟ್ಟಿ ಅವರಿಗೆ ಪ್ರಥಮ ಪ್ರಯತ್ನದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಾಂಗ್ರೆಸ್ ಪಾರುಪತ್ಯ ಸಾಧಿಸಿದ್ದ ಸಂದರ್ಭದಲ್ಲೂ ಕೂಡಾ ಬಿಜೆಪಿ ಪಾರಮ್ಯ ಮೆರೆದಿದ್ದ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದ್ದ ಗೋಳ್ತಮಜಲು ಕ್ಷೇತ್ರದಲ್ಲಾಗಿತ್ತು ಶೆಟ್ಟಿ ಅವರಿಗೆ ಕೈ ಟಿಕೆಟ್ ದೊರೆಕಿದ್ದು. ಇಲ್ಲಿ ಅವರಿಗೆ ಎದುರಾಳಿಯಾಗಿ ಬಿಜೆಪಿ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡವರು ಕಾಂಗ್ರೆಸ್ ಪಕ್ಷದಲ್ಲಿದ್ದು, ಜಿಲ್ಲಾ ಪಂಚಾಯತಿನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ವತಃ ತಾನೇ ಬಿಜೆಪಿ ಪರವಾಗಿ ಮತಚಲಾಯಿಸಿದ್ದಲ್ಲದೆ ಬಳಿಕ ನಡೆದ ಬಂಟ್ವಾಳ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲೂ ತನ್ನ ಪತ್ನಿಯ ಮೂಲಕ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಲ್ಲದೆ ಬಳಿಕ ಪಕ್ಷಾಂತರಗೊಂಡು ಸ್ಪರ್ಧೆಗಿಳಿದವರು ಮತ್ತೋರ್ವ ಬಂಟ ಸಮುದಾಯ ಪ್ರಭಾವೀ ನಾಯಕ ಸದಾನಂದ ಮಲ್ಲಿ ಅವರಾಗಿದ್ದರು. ಈ ಮೂಲಕ ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೋಳ್ತಮಜಲು ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಇಬ್ಬರು ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಭಾರೀ ಕುತೂಹಲ ಮೂಡಿಸಿದ ಜಂಘೀ ಕುಸ್ತಿಯ ಕಣವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯ ಹಿಂದೆ ಹಿರಿಯ ರಾಜಕಾರಣಿ ರಮಾನಾಥ ರೈ ಅವರಿದ್ದರೆ, ಬಿಜೆಪಿ ಅಭ್ಯರ್ಥಿ ಸದಾನಂದ ಮಲ್ಲಿ ಅವರ ಹಿಂದೆ ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರಿದ್ದರು. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿತ್ತು. ಅಂದು ಎಸ್ ಡಿ ಪಿ ಐ ಕೂಡಾ ಆರಂಭಿಕ ಹಂತದಲ್ಲಿ ಅಸ್ತಿತ್ವಕ್ಕಾಗಿ ಕಣಕ್ಕಿಳಿದು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿತ್ತು. ಇದು ಕೂಡಾ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಶೆಟ್ಟಿ ಅವರಿಗೆ ಮತ್ತಷ್ಟು ಕಗ್ಗಂಟಾಗಿತ್ತು. ಈ ಎಲ್ಲ ಸಂಧಿಗ್ಧತೆಯ ಮಧ್ಯೆಯೂ ರಮಾನಾಥ ರೈ ಅವರ ಗರಡಿಯಲ್ಲಿ ಪಳಗಿದ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ಯುವ ರಾಜಕಾರಣಿ ಚಂದ್ರಪ್ರಕಾಶ್ ಶೆಟ್ಟಿ ಅವರು 400 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿ ಬಿಜೆಪಿ ಹಾಗೂ ಆರೆಸ್ಸೆಸ್ ಭದ್ರಕೋಟೆಯನ್ನು ಬೇಧಿಸಿ ಬರೋಬ್ಬರಿ 35 ವರ್ಷಗಳ ಬಳಿಕ ಕೈ ಪತಾಕೆಯನ್ನು ಹಾರಿಸುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ತಮ್ಮ ಸ್ವಪ್ರತಿಷ್ಠೆಯನ್ನು ಸಾರಿದ್ದರು. ಅಂದಿನಿಂದ ಇದುವರೆಗೂ ಪ್ರಕಾಶ್ ಶೆಟ್ಟಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಬಳಿಕದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಪ್ರಕಾಶ್ ಶೆಟ್ಟಿ ಸೀಟು ಗಿಟ್ಟಿಸಿಕೊಂಡಿದ್ದ ಸಜಿಪಮುನ್ನೂರು ಕ್ಷೇತ್ರ ಕೂಡಾ ಶೆಟ್ಟಿ ಅವರಿಗೆ ಸುಲಭದ ತುತ್ತಾಗಿರಲಿಲ್ಲ. ಇಲ್ಲಿ ಅವರ ಎದುರಾಳಿಯಾಗಿದ್ದುದು ವಿಟ್ಲ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾಗಿದ್ದ, ಪ್ರಭಾವಿ ಬಿಜೆಪಿ ನಾಯಕ ಕೆ ಪದ್ಮನಾಭ ಕೊಟ್ಟಾರಿ ಅವರಾಗಿದ್ದರು. ಇಲ್ಲಿಯೂ ಎಲ್ಲ ಅಡೆ ತಡೆಗಳನ್ನು ಬೇಧಿಸಿದ ಪ್ರಕಾಶ್ ಶೆಟ್ಟಿ ಅವರು ವಿಜಯ ಪತಾಕೆ ಹಾರಿಸಿದ್ದರು.
ಈ ಮೂಲಕ ಕಠಿಣ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಧ್ವಜವನ್ನು ಎತ್ತಿ ಹಿಡಿದು ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಕೂಡಾ ಚಂದ್ರಪ್ರಕಾಶ್ ಶೆಟ್ಟಿ ಅವರಿಗೆ ಸಲ್ಲುತ್ತದೆ.
ಪಕ್ಷಕ್ಕಾಗಿ ಕಠಿಣ ಪರಿಸ್ಥಿತಿಯಲ್ಲೂ ಹೋರಾಟದ ಮೂಲಕ ಮೇಲೇರಿ ಬಂದ ತನ್ನ ಪಕ್ಷ ನಿಷ್ಠೆಯ ಇತಿಹಾಸವನ್ನು ಮುಂದಿಟ್ಟು ಇದೀಗ ಚಂದ್ರಪ್ರಕಾಶ್ ಶೆಟ್ಟಿ ಅವರು ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಿರಿಯನ್ನು ತನಗೆ ನೀಡುವಂತೆ ಜಿಲ್ಲೆಗೆ ಆಗಮಿಸಿರುವ ಎಐಸಿಸಿ ವೀಕ್ಷಕರೂ, ಕ್ಯಾಲಿಕಟ್ ಶಾಸಕರೂ ಆಗಿರುವ ಜಯಂತ್ ಅವರನ್ನು ಭೇಟಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.











0 comments:
Post a Comment