ಬಂಟ್ವಾಳ, ಆಗಸ್ಟ್ 07, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಅವೈಜ್ಞಾನಿಕ ಸರ್ಕಲಿನಲ್ಲಿ ಗುರುವಾರ ಸಂಜೆ ವೇಳೆ ಮತ್ತೊಂದು ಭೀಕರ ಸಂಭವಿಸಿ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತ ಸ್ಕೂಟರ್ ಸವಾರರನ್ನು ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಯಶ್ವಂತ ಕುಲಾಲ್ ಹಾಗೂ ಬೋರುಗುಡ್ಡೆ ನಿವಾಸಿ ದಯಾನಂದ ಕುಲಾಲ್ ಎಂದು ಹೆಸರಿಸಲಾಗಿದೆ. ಆಗಸ್ಟ್ 6 ರಂದು ಸಂಜೆ ಸುಮಾರು 6.30 ರ ವೇಳೆಗೆ ಬಿ ಸಿ ರೋಡಿನ ಮುಖ್ಯ ವೃತ್ತದಲ್ಲಿ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಂಚರಿಸುತ್ತಿದ್ದ ಸ್ಕೂಟರಿಗೆ ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರೂಕ್ ಎಂಬವರು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರರಿಬ್ಬರ ಮೇಲೆ ಟಿಪ್ಪರ್ ಲಾರಿ ಹರಿದು ಇಬ್ಬರೂ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ ಗಾಯಾಳು ಯಶವಂತ ಕುಲಾಲ್ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ದಯಾನಂದ ಅವರು ಕೂಡಾ ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತ ನಡೆಸಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment