ಉಪ್ಪಿನಂಗಡಿ, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ಕಾರ್ಕಳದ ಈದು ನಿವಾಸಿ ಶೈಖ್ ಮುಕ್ತಾರ್ ಎಂಬಾತ ತನ್ನ ಪರಿಚಯಸ್ಥರ ಮಗಳನ್ನು ಕೆಲಸಕ್ಕೆಂದು ಕಾರಿನಲ್ಲಿ ಹಾಸನ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ತಂಡವೊಂದು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿ ಆಗಸ್ಟ್ 11 ರಂದು ರಾತ್ರಿ ನಡೆದಿದೆ.
ಆರೋಪಿಗಳನ್ನು ಧನುಷ್ ಕೊಕ್ಕಡ (23), ದಿನೇಶ್ ಚಾರ್ಮಾಡಿ (45), ಪೂರ್ಣಕ್ಷ ಬಿ ಪುದುವೆಟ್ಟು (40), ಸೂರಜ್ ಕೊಕ್ಕಡ (25), ರಂಜಿತ್ ಭಂಡಾರಿ ಕೊಕ್ಕಡ (29) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಶೈಕ್ ಮುಕ್ತಾರ್ ಪೊಲೀಸರಿಗೆ ದೂರು ನೀಡಿದ್ದು, ಇವರು ಕೆಲಸದ ನಿಮಿತ್ತ ಆಗಸ್ಟ್ 11 ರಂದು ರಾತ್ರಿ ತನ್ನ ಪರಿಚಯಸ್ಥರೊಬ್ಬರ ಅಪ್ರಾಪ್ತ ಪ್ರಾಯದ ಮಗಳನ್ನು ಕರೆದುಕೊಂಡು ಹಾಸನ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳ ತಂಡ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ವಿಚಾರಿಸಿ, ಶೈಕಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2026, ಕಲಂ 189(2), 191(2), 126(2), 353(2), 352, 115(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ, ಅಪ್ರಾಪ್ತ ಬಾಲಕಿಯ ತಾಯಿ, ತನ್ನ ಮಗಳನ್ನು ಆರೋಪಿ ಶೇಕ್ ಮುಕ್ತಾರ್ (52) ಎಂಬಾತ ಬಲವಂತವಾಗಿ ಆತನ ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ZERO FIR 03/2026, ಕಲಂ 137(2) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










0 comments:
Post a Comment