ಮಂಗಳೂರು, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ನಾಗರ ಪಂಚಮಿ ಹಬ್ಬವನ್ನು ‘ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ ಹಬ್ಬ” ವನ್ನಾಗಿ ಆಚರಣೆ ಮಾಡುವ ಮೂಲಕ ಪರಿಸರವನ್ನು ರಕ್ಷಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಹಬ್ಬದಲ್ಲಿ ನಿಷೇಧಿತ/ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಕೈಬಿಟ್ಟು, ಬಟ್ಟೆ ಚೀಲಗಳು, ಬಾಳೆ ಎಲೆಗಳು ಮತ್ತು ಸ್ಟೀಲ್ ಪಾತ್ರೆಗಳನ್ನು ಇತ್ಯಾದಿ ಪರ್ಯಾಯವಾಗಿ ಮರು ಬಳಕೆಯಾಗುವ ವಸ್ತುಗಳನ್ನು ಬಳಸುವ ಮೂಲಕ ನಾಗರ ಪಂಚಮಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ನಿಷೇಧಿತ/ ಏಕ ಬಳಕೆ ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಲು ತರುವ ಬದಲಾಗಿ ಪರ್ಯಾಯವಾಗಿ ಮರುಬಳಕೆಗೆ ಉಪಯೋಗಿಸುವ ವಸ್ತುಗಳನ್ನು ಬಳಸಬೇಕು. ನಿಷೇಧಿತ/ ಏಕ ಪ್ಲಾಸ್ಟಿಕ್ ತಟ್ಟೆ-ಲೋಟಗಳ ಬದಲಿಗೆ ಬಾಳೆ ಎಲೆ, ಅಡಿಕೆ ಹಾಳೆ ಅಥವಾ ಸ್ಟೀಲ್ ತಟ್ಟೆಗಳಂತಹ ಮರುಬಳಕೆ ವಸ್ತುಗಳನ್ನು ಉಪಯೋಗಿಸಬೇಕು. ನಿಷೇಧಿತ/ ಏಕ ಪ್ಲಾಸ್ಟಿಕ್ ತೋರಣ ಇತರೆ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸದೆ ಪರ್ಯಾಯವಾಗಿ ಪ್ರಕೃತಿದತ್ತವಾಗಿ ಸಿಗುವ ಮಾವಿನ ತೋರಣ, ಬಾಳೆಕಂಬ ಮತ್ತು ಹೂವಿನ ಹಾರಗಳನ್ನು ಬಳಸಬೇಕು. ರಂಗೋಲಿ ಬಿಡಿಸಲು ರಾಸಾಯನಿಕ ಬಣ್ಣಗಳ ಬದಲಾಗಿ, ನೈಸರ್ಗಿಕ ಬಣ್ಣಗಳು ಅಥವಾ ಹೂವಿನ ದಳಗಳನ್ನು ಉಪಯೋಗಿಸಬೇಕು. ಪೂಜಾ ಸ್ಥಳಗಳಲ್ಲಿ ಹೂವು, ಎಣ್ಣೆ, ಊದುಬತ್ತಿ, ಅರಶಿನ ಹುಡಿ, ಸೀಯಾಳ ಇತರೆ ಪೂಜಾ ಸಾಮಾಗ್ರಿಗಳನ್ನು ನಿಷೇಧಿತ/ ಏಕ ಪ್ಲಾಸ್ಟಿಕ್ ಚೀಲಗಳಲ್ಲಿ ತರದೆ, ಬದಲಾಗಿ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ಬಳಸಬೇಕು ಹಾಗೂ ಪ್ರಸಾದ ಹಂಚಲು ನಿಷೇಧಿತ/ ಏಕ ಪ್ಲಾಸ್ಟಿಕ್ ಚೀಲಗಳಿಗೆ ಬದಲಾಗಿ ಬಟ್ಟೆ ಚೀಲ ಅಥವಾ ಪೇಪರ್ ಕವರುಗಳನ್ನು ಬಳಸಬೇಕು.
ನಾಗಬನದಲ್ಲಿ ಹಾಗೂ ದೇವಸ್ಥಾನಗಳಲ್ಲಿ ಪರಿಸರಕ್ಕೆ ಹಾನಿಯಾಗುವ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಸೀಯಾಳ ಗೆರಟೆ (ತೆಂಗಿನ ಸಿಪ್ಪೆಯ) ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಸೂಕ್ತ ಡಸ್ಟ್ ಬಿನ್ ಗಳ ವ್ಯವಸ್ಥೆ ಮಾಡಬೇಕು. ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯವಾಗಿ ವಿಂಗಡಿಸಿ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಮಾಡಲು ದೇವಸ್ಥಾನಗಳ ಆಡಳಿತ ಮಂಡಳಿಯು ಕಟ್ಟುನಿಟ್ಟಿನÀ ವ್ಯವಸ್ಥೆಯನ್ನು ಕೈಗೊಳ್ಳಬೇಕು.
ಈ ಮೂಲಕ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಭಕ್ತರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಿ ಪರಿಸರ ಸ್ನೇಹಿಯಾಗಿ ನಾಗರ ಪಂಚಮಿಯನ್ನು ಆಚರಿಸುವಂತೆ ಮಹಾನಗರಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















0 comments:
Post a Comment