ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ರಾಮ ಭಜನಾ ಮಂದಿರದ ಕಾಣಿಕೆ ಡಬ್ಬಿ ಅಡ್ಡ ಹಾಕಿ ಹಣ ಕದಿಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆಗಸ್ಟ್ 18 ರಂದು ಸಂಭವಿಸಿದೆ.
ಇಲ್ಲಿನ ರಾಮ ಭಜನಾ ಮಂದಿರಕ್ಕೆ ಆಡಳಿತ ಸಮಿತಿ ಸದಸ್ಯ ದಿನಕರ ಎಂಬವರು ಆಗಸ್ಟ್ 18 ರಂದು ಬೆಳಿಗ್ಗೆ 11.30-11.45ರ ವೇಳೆಗೆ ಸೀಯಾಳ ಇಡಲೆಂದು ತೆರಳಿದಾಗ ಅಪರಿಚಿತ ವ್ಯಕ್ತಿ ಕಾಣಿಕೆ ಡಬ್ಬಿಯನ್ನು ಅಡ್ಡ ಹಾಕಿ ಅದರಲ್ಲಿದ್ದ ಹಣ ಕದಿಯುತ್ತಿದ್ದ. ಇದನ್ನು ನೋಡಿದ ದಿನಕರ ಅವರು ಪರಿಚಯಸ್ಥರಾದ ರಿಕ್ಷಾ ಚಾಲಕರಾದ ತಾರೇಶ್, ರೂಪೇಶ್ ಹಾಗೂ ರಂಜನ್ ಅವರಿಗೆ ವಿಷಯ ತಿಳಿಸಿ ಅವರೊಂದಿಗೆ ಮಂದಿರಕ್ಕೆ ಹೋಗಿ ಅಪರಿಚಿತ ಕಳ್ಳನನ್ನು ಹಿಡಿದಿಟ್ಟಿದ್ದಾರೆ.
ಅಪರಿಚಿತ ಕಳ್ಳ ಮಂದಿರದಿಂದ ಕದ್ದ ಹಣ ಸುಮಾರು 700 ರೂಪಾಯಿ ಎಂದು ಅಂದಾಜಿಸಲಾಗಿದೆ. ಆತನ ಚೀಲದಲ್ಲಿ ಮಂದಿರದ ಹಣವಲ್ಲದೆ ಬೇರೆ ಯಾವುದೋ ದೇವಸ್ಥಾನದಿಂದ ಕದ್ದ ಕಳಶದ ತಂಬಿಗೆ ಹಾಗೂ ಹಿತ್ತಾಳೆಯ ದೇವರ ಮೂರ್ತಿ ಪತ್ತೆಯಾಗಿದೆ. ಈ ಬಗ್ಗೆ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಕೆ ಶಶಿಧರ ಅವರು ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment