ಬಂಟ್ವಾಳ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಕಸಬಾ ಗ್ರಾಮದ ಮಣಿ ಎಂಬಲ್ಲಿನ ಶ್ರೀ ಮಾರುತಿ ಮರದ ಮಿಲ್ಲಿನಲ್ಲಿ ಲಾರಿಯಿಂದ ಮರದ ದಿಮ್ಮಿ ಜಾರಿ ಬಿದ್ದು ಕಂಡಕ್ಟರ್ ದಾರುಣವಾಗಿ ಮೃತಪಟ್ಟ ಘಟನೆ ಸೆ 9 ರಂದು ಮಧ್ಯಾಹ್ನ ಸಂಭವಿಸಿದೆ.
ಮೃತ ಲಾರಿ ಕಂಡಕ್ಟರ್ ನನ್ನು ಶಕೀಲ್ ಅಬ್ದುಲ್ ಅಜೀಬ (53) ಎಂದು ಹೆಸರಿಸಲಾಗಿದೆ. ಕೇರಳ ಕಾಲಡಿ ಮರದ ಮಿಲ್ಲಿನಿಂದ ಕೆಎ22 ಎಎ9799 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಚಾಲಕ ಯಶ ಯರಮಾಳಕರ ಹಾಗೂ ಕಂಡಕ್ಟರ್ ಶಕೀಲ್ ಅಬ್ದುಲ್ ಅಜೀಬ ಅವರು ಮರದ ದಿಮ್ಮಿ ತಂದಿದ್ದು, ಮಧ್ಯಾಹ್ನದ ಬಳಿಕ ಚಾಲಕ ಯಶ ಅವರು ಲಾರಿಯನ್ನು ಹಿಂದಕ್ಕೆ ನೋಡದೆ ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಮರದ ದಿಮ್ಮಿ ಜಾರಿ ಅಲ್ಲೇ ಇದ್ದ ಕಂಡಕ್ಟರ್ ಶಕೀಲ್ ಅವರ ಮೇಲೆ ಬಿದ್ದಿದೆ.
ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮರದ ಮಿಲ್ಲಿನ ಚಂದಪ್ಪ ಅವರು ನೀಡಿರುವ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment