ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ (ರಿ), ಬಂಟ್ವಾಳ ಪೆÇಲೀಸ್ ಇಲಾಖೆ, ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮ ಬಿ ಸಿ ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.
“ಸುರಕ್ಷಿತ ಆಹಾರ-ಉತ್ತಮ ಅರೋಗ್ಯ-ಸಂತೋಷದ ಜೀವನ” ವಿಷಯದ ಬಗ್ಗೆ ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಮಮ್ತಾಜ್ ಮಾತನಾಡಿ, ಆಹಾರವನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಶುದ್ಧ, ಸುರಕ್ಷಿತ ಹಾಗೂ ಅರೋಗ್ಯವಾಗಿರುವಂತೆ ನೋಡಿಕೊಳ್ಳುವುದು. ಆಹಾರವು ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರದ ಜೊತೆಗೆ ಶುದ್ಧ, ಸುರಕ್ಷಿತ ಮತ್ತು ಗುಣಮಟ್ಟ ಕೂಡಿರುವುದು ಬಹಳ ಮುಖ್ಯ ಎಂದರು.
ಆಹಾರ ತಯಾರಿಸುವುದರಿಂದ ಹಿಡಿದು ಸಂಗ್ರಹಣೆ, ಸಾಗಾಟ ಸೇವಿಸುವವರೆಗೆ ಪ್ರತಿಯೊಂದು ಹಂತದಲ್ಲಿಯೂ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಬೇಕು. ಕಲುಷಿತ ಆಹಾರದಿಂದ ವಿವಿಧ ಖಾಯಿಲೆಗಳು ಉಂಟಾಗಬಹುದು. ಆಹಾರವನ್ನು ಸರಿಯಾಗಿ ತೊಳೆಯುವುದು, ಚೆನ್ನಾಗಿ ಬೇಯಿಸುವುದು, ಸ್ವಚ್ಛವಾಗಿ ಸಂಗ್ರಹಿಸುವುದು ಮತ್ತು ಅವಧಿ ಮೀರಿದ ಆಹಾರವನ್ನು ಸೇವಿಸದಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಹಾಗೂ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಮಹತ್ವವಿದೆ ಎಂದವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ ಪಿ ಅವರು ಮಾತನಾಡಿ, ಅರೋಗ್ಯವಂತ ಸಮಾಜವನ್ನು ಹೇಗೆ ಸೃಷ್ಟಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರಲ್ಲದೆ ದೈನಂದಿನ ಜೀವನದಲ್ಲಿ ವ್ಯಾಯಾಮದ ಕೊರತೆ, ಉಪವಾಸ, ಆಹಾರದ ಗುಣಮಟ್ಟ, ಅಸುರಕ್ಷಿತ ಆಹಾರ ಇವೆಲ್ಲದರ ಕುರಿತು ಜಾಗೃತಿ ವಹಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಅಕ್ಷತಾ ಶೆಟ್ಟಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಶ್ರೀಮತಿ ಆಶಾಮಣಿ ಡಿ ರೈ ಮಾತನಾಡಿ, ಪೌಷ್ಟಿಕಾಂಶ ದಿನದ ಪ್ರಯುಕ್ತ ಪೌಷ್ಟಿಕ ಆಹಾರದ ಸುರಕ್ಷತೆ ಮತ್ತು ಪೆÇೀಷಣೆ ಹಾಗೂ ಕಾನೂನಾತ್ಮಕ ಹಕ್ಕುಗಳ ಕುರಿತಾದ ಕಾನೂನು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ, ಬಂಟ್ವಾಳ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ನೂರಾ ಬಿ ಮಾತನಾಡಿ, ಗರ್ಭಿಣಿ, ಬಾಣಂತಿ ಆಹಾರ ಹಾಗೂ 6 ತಿಂಗಳಿನಿಂದ 6 ವರ್ಷದ ಮಕ್ಕಳ ಆಹಾರ, ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಒದಗಿಸಬೇಕಾದ ಆಹಾರ, ಕಿಶೋರಾವಸ್ಥೆ ಆಹಾರ, ತಾಯಂದಿರ ಆಹಾರದ ಬಗ್ಗೆ, ಕಲಬೆರಕೆ ಆಹಾರ, ಪೌಷ್ಟಿಕಯುಕ್ತ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ದುರ್ಗಪ್ಪ ಅವರು, ಮಾದಕ ವ್ಯಸನಮುಕ್ತ ಪರಿಸರ ನಿರ್ಮಿಸಲು ನಾವೆಲ್ಲರೂ ಶ್ರಮಿಸುವ ಅಗತ್ಯತೆ ಬಗ್ಗೆ ತಿಳಿಸುತ್ತಾ 112 ಸಹಾಯವಾಣಿಯ ಸದುಪಯೋಗದ ಬಗ್ಗೆ ವಿವರಿಸಿದರು.
ಮೇಲ್ವಿಚಾರಕಿ ಶ್ರೀಮತಿ ಮುಬೀನಾ ಬಾನು ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಶ್ರೀಮತಿ ಯಶೋಧ ವಂದಿಸಿದರು. ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಶಾಲಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,











0 comments:
Post a Comment