ಪರಿಸರಸ್ನೇಹಿ ಗಣೇಶ ಚತುರ್ಥಿ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ : ನಿರ್ದೇಶನ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆ - Karavali Times ಪರಿಸರಸ್ನೇಹಿ ಗಣೇಶ ಚತುರ್ಥಿ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ : ನಿರ್ದೇಶನ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆ - Karavali Times

728x90

10 September 2026

ಪರಿಸರಸ್ನೇಹಿ ಗಣೇಶ ಚತುರ್ಥಿ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ : ನಿರ್ದೇಶನ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆ

ಮಂಗಳೂರು, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ರಾಜ್ಯಾದ್ಯಂತ ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಶ್ರದ್ದೆ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ತಯಾರಿಸಿದ ಮತ್ತು ರಾಸಾಯನಿಕ/ ಭಾರ ಲೋಹ ಆಧಾರಿತ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಸಾಮಾನ್ಯವಾಗುತ್ತಿವೆ. ಇಂತಹ ಮೂರ್ತಿಗಳು ನೈಸರ್ಗಿಕವಾಗಿ ಕರಗುವುದಿಲ್ಲ. ನೀರಿನಲ್ಲಿ ಕರಗಿದ ಆಮ್ಲ ಜನಕವನ್ನು ಕುಗ್ಗಿಸುತ್ತವೆ. ಖಾಯಂ ಗಡಸುತನವನ್ನು ಹೆಚ್ಚಿಸುತ್ತವೆ ಮತ್ತು ವಿಸರ್ಜನೆಯ ನಂತರ ಜಲಮೂಲಗಳಿಗೆ ಪಾದರಸ, ಆರ್ಸೆನಿಕ್, ಸೀಸ, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್ ಮತ್ತು ಸತುಗಳಂತಹ ವಿಷಕಾರಿ ಭಾರ ಲೋಹಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಜಲಚರಗಳಿಗೆ ಹಾನಿ ಉಂಟಾಗುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಅಪಾಯ ಉಂಟುಮಾಡುತ್ತದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೈಸರ್ಗಿಕ, ಜೈವಿಕವಾಗಿ ವಿಘಟನೀಯ ಮತ್ತು ಪರಿಸರ ಸ್ನೇಹಿ ವಸ್ತುಗಳಿಂದ, ವಿಶೇಷವಾಗಿ ನೈಸರ್ಗಿಕ ಜೇಡಿ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರೋತ್ಸಾಹಿಸಲು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ಮಾಡಿದ ಹಾಗೂ ಏಕ-ಬಳಕೆಯ ಪ್ಲಾಸ್ಟಿಕ್/ ಥರ್ಮೋಕೋಲಿನಿಂದ ಲೇಪಿತವಾದ ಮೂರ್ತಿಗಳನ್ನು ನಿಷೇಧಿಸಲು ಎಲ್ಲಾ ರಾಜ್ಯಗಳು/ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಕರ್ನಾಟಕ ಸರ್ಕಾರವು ಭಾರ ಲೋಹ ಆಧಾರಿತ ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು, ಈ ನಿಷೇಧವನ್ನು ಕಟ್ಟುನಿಟ್ಟಾಗಿ ಮತ್ತು ಸಂಪೂರ್ಣವಾಗಿ ಜಾರಿಗೊಳಿಸಲು ನಿರ್ದೇಶಿಸಿದೆ. 

ಈ ಹಿನ್ನೆಲೆಯಲ್ಲಿ, ಜಲಮೂಲಗಳ ಮಾಲಿನ್ಯವನ್ನು ತಡೆಗಟ್ಟಲು, ಸಾರ್ವಜನಿಕ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಲು ಹಾಗೂ ಮುಂಬರುವ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಉತ್ತೇಜಿಸಲು,  ಕರ್ನಾಟಕ ರಾಜ್ಯ ಮಾಲಿನ್ಯ  ನಿಯಂತ್ರಣ ಮಂಡಳಿಯು ಈ ಮೂಲಕ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಈ ಕೆಳಗಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸುತ್ತದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ನಿಂದ ಮಾಡಿದ ಅಥವಾ ರಾಸಾಯನಿಕ/ ಭಾರ ಲೋಹ ಆಧಾರಿತ ಬಣ್ಣಗಳಿಂದ ಅಲಂಕರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ವಿತರಣೆ, ಪ್ರದರ್ಶನ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುವುದು ಹಾಗೂ ನೈಸರ್ಗಿಕ ಜೇಡಿಮಣ್ಣು/ ಮಣ್ಣು ಮತ್ತು ಇತರ ಜೈವಿಕ ವಿಘಟನೀಯ, ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಮೂರ್ತಿಗಳನ್ನು ತಯಾರಿಸಬೇಕು.

ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ತಡೆಗಟ್ಟಲು ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳ ಮುಂಗಡ ತಪಾಸಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ತಯಾರಿಸಿದ, ಸಂಗ್ರಹಿಸಿದ ಅಥವಾ ಮಾರಾಟಕ್ಕೆ ಇಟ್ಟಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ಜಪ್ತಿ ಮಾಡಿ ಮತ್ತು ಸಂಬಂಧಪಟ್ಟ ವ್ಯಕ್ತಿಗಳು/ ಘಟಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.

ವಿಸರ್ಜನೆಗೆ ಮೊದಲು, ಮೂರ್ತಿಯಿಂದ ಹೂವುಗಳು, ಎಲೆಗಳು, ಬಟ್ಟೆ, ಅಲಂಕಾರಿಕ ವಸ್ತುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಬೇರ್ಪಡಿಸಬೇಕು. ಮೂಲದಲ್ಲೇ ತ್ಯಾಜ್ಯ ಪ್ರತ್ಯೇಕಿಸುವ ಅಗತ್ಯತೆಗಳಿಗೆ ಅನುಗುಣವಾಗಿ ಪ್ರತಿಯೊಂದು ನಿಗದಿತ ವಿಸರ್ಜನಾ ಸ್ಥಳದಲ್ಲಿ ತ್ಯಾಜ್ಯದ ಪ್ರತ್ಯೇಕ ಸಂಗ್ರಹಣೆಗಾಗಿ ಬಣ್ಣದ ಕೋಡ್ ಗಳಿರುವ ಕಸದ ತೊಟ್ಟಿಗಳನ್ನು ಒದಗಿಸಬೇಕು.

ಈ ನಿರ್ದೇಶನಗಳನ್ನು ಉಲ್ಲಂಘಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ಅಥವಾ ನಿಷೇಧಿತ ರಾಸಾಯನಿಕ/ಭಾರ ಲೋಹದ ಬಣ್ಣಗಳನ್ನು ಲೇಪಿಸಿದ ಮೂರ್ತಿಗಳನ್ನು ತಯಾರಿಸುವ, ಸಂಗ್ರಹಿಸುವ, ಮಾರಾಟ ಮಾಡುವ, ಬಳಸುವ ಅಥವಾ ವಿಸರ್ಜಿಸುವ ವ್ಯಕ್ತಿಗಳು, ತಯಾರಕರು, ವರ್ತಕರು ಅಥವಾ ಆಯೋಜಕರು ತಯಾರಿಕಾ ಘಟಕಗಳ ಮುಚ್ಚುವಿಕೆ ಮತ್ತು ಜಪ್ತಿ, ಹಾಗೂ ಪ್ರಕ್ರಿಯೆ/ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು.

ಇಂತಹ ಮೂರ್ತಿಗಳನ್ನು ಯಾವುದೇ ಜಲಮೂಲಕ್ಕೆ ವಿಸರ್ಜಿಸುವುದು ಕಾಯ್ದೆಯ ಉಲ್ಲಂಘನೆಯಾಗಿದ್ದು, ದಂಡದೊಂದಿಗೆ ಕನಿಷ್ಠ ಒಂದು ವರ್ಷ ಆರು ತಿಂಗಳ ಅವಧಿಗೆ ವಿಸ್ತರಿಸಬಹುದಾದ, ಮತ್ತು 6 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅರ್ಹವಾಗಿರುತ್ತದೆ.

ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಹಾಗೂ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ಯಾವುದೇ ರೀತಿಯ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪರಿಸರಸ್ನೇಹಿ ಗಣೇಶ ಚತುರ್ಥಿ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ : ನಿರ್ದೇಶನ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆ Rating: 5 Reviewed By: karavali Times
Scroll to Top