ಮಂಗಳೂರು, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಸೆಪ್ಟೆಂಬರ್ 1 ರಂದು ಮಧ್ಯರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗ ತುಂಡರಿಸಿ, ಗರ್ಭಗುಡಿಯಲ್ಲಿದ್ದ ಬೆಲೆ ಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ದೈವದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದ್ದ ಪ್ರಕರಣ ಬೇಧಿಸಿರುವ ಪೊಲೀಸರು ಕಳವಾಗಿರುವ ಸೊತ್ತುಗಳ ಸಹಿತ ನಾಲ್ವರು ಅಂತರ್ ರಾಜ್ಯ ಖದೀಮರನ್ನು ಬಲೆಗೆ ಕೆಡವಿದ್ದಾರೆ.
ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆ, ಪಡುಬಿದ್ರೆ ಹೆಜಮಾಡಿ ಗ್ರಾಮದ ಎಸ್ ಎಸ್ ರೋಡ್ ಎಚ್ ಕೆ ಮಂಝಿಲ್ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಜಾಹೀದ್ ಸಿನಾನ್ (36), ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ನಿಟ್ಟೆ ಪಡ್ಡೆ ಅಂಗಡಿ ಹೌಸ್ ನಿವಾಸಿ ದಿವಂಗತ ಯಾಕೂಬ್ ಅವರ ಪುತ್ರ ಯಾಸೀನ್ (36), ದಾವಣಗೆರೆ ಛಲವಾದಿಕೇರಿ ಗೋಕುಲನಗರ ನಿವಾಸಿ ಅಕ್ಬರ್ ಅಲಿ ಅವರ ಪುತ್ರ ಮಹಮ್ಮದ್ ಅಫ್ರಿದಿ (26) ಹಾಗೂ ದಾವಣಗೆರೆ ಜಾಲಿನಗರ 4ನೇ ಕ್ರಾಸ್, 1ನೇ ಮುಖ್ಯ ರಸ್ತೆ ನಿವಾಸಿ ಶೇಕ್ ಅಬ್ದುಸ್ ಸುಬನ್ ಎಂಬವರ ಪುತ್ರ ಎಸ್ ಕೆ ಅಬ್ದುಲ್ ಜುಮ್ಮಾನ್ (26) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 65/2026 ಕಲಂ 331(3), 331(4), 305 ಬಿ.ಎನ್.ಎಸ್ ಪ್ರಕರಣವನ್ನು ವಿಶೇಷ ತಂಡ ರಚಿಸಿ ಬೆನ್ನತ್ತಿದ ಪೊಲೀಸರು ಸೆ 6 ರಂದು ಆರೋಪಿಗಳಾದ ಜಾಹೀದ್ ಸಿನಾನ್ ಮತ್ತು ಯಾಸೀನ್ ಎಂಬವರನ್ನು ಮುಲ್ಕಿ ಕಾರ್ನಾಡು ಎಂಬಲ್ಲಿ ಹಾಗೂ ಸೆ 7 ರಂದು ಆರೋಪಿಗಳಾದ ಮಹಮದ್ ಅಫ್ರಿದಿ ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ ಎಂಬವರನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೆÇಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳಿಂದ ಕಳವು ಮಾಡಲಾದ ಸುಮಾರು 11.20 ಲಕ್ಷ ರೂಪಾಯಿ ಮೌಲ್ಯದ 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ 34.820 ಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಕಾರು ಮತ್ತು ಬೈಕ್ ಸೇರಿದಂತೆ ಒಟ್ಟು 17.20 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಯಿಂದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಗಳು ಕೂಡಾ ಪತ್ತೆಯಾಗಿದೆ.
ಪ್ರಕರಣದ 1ನೇ ಆರೋಪಿ ಜಾಹೀದ್ ಸಿನಾನ್ ಎಂಬಾತನ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ಶೀಕಾಂತ್ ಕೆ ಅವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಮುಲ್ಕಿ ಠಾಣಾ ಪಿಎಸ್ಸೈ ರಾಘವೇಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
















0 comments:
Post a Comment